ವಾರಣಾಸಿ ಚಿತ್ರದ ಆಕ್ಷನ್ ಶೂಟಿಂಗ್ ಮುಗಿಸಿದ ರಾಜಮೌಳಿ
x

3,500 ಕಲಾವಿದರೊಂದಿಗೆ ಬೃಹತ್ ಯುದ್ಧದ ದೃಶ್ಯ ಚಿತ್ರೀಕರಿಸಲಿರುವ ರಾಜಮೌಳಿ

ವಾರಣಾಸಿ ಚಿತ್ರದ ಆಕ್ಷನ್ ಶೂಟಿಂಗ್ ಮುಗಿಸಿದ ರಾಜಮೌಳಿ

ಎಸ್‌ಎಸ್‌ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ ಬಿಗ್ ಬಜೆಟ್ ಸಿನಿಮಾ 'ವಾರಣಾಸಿ' ಚಿತ್ರದ ಪ್ರಮುಖ ಆಕ್ಷನ್ ದೃಶ್ಯಗಳ ಶೂಟಿಂಗ್ ಮುಗಿದಿದ್ದು, ಕೇವಲ 80 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.


Click the Play button to hear this message in audio format

ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರು ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ವಾರಣಾಸಿ' ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವು ಸದ್ಯ ನಿರ್ಮಾಣದ ಹಂತದಲ್ಲಿದ್ದು, ಶೂಟಿಂಗ್ ಮುಗಿಯಲು ಕೇವಲ 80 ದಿನಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.

ಫ್ರಾನ್ಸ್‌ನಲ್ಲಿ ನಡೆದ 'ಆರ್‌ಆರ್‌ಆರ್' ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು 'ವಾರಣಾಸಿ' ಚಿತ್ರದ ಪ್ರಗತಿಯ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನು ಕೇವಲ ಒಂದು ಸಣ್ಣ ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ರಾಜಮೌಳಿ ಅವರು, ನನ್ನ ನಿರ್ಮಾಪಕರು ಇಲ್ಲೇ ಇದ್ದಾರೆ, ಆದ್ದರಿಂದ ಅವರು ಹೆಚ್ಚಿನ ವಿವರಗಳನ್ನು ಬಿಟ್ಟುಕೊಡಲು ನನಗೆ ಬಿಡುವುದಿಲ್ಲ. ಆದರೆ ನಾವು ಚಿತ್ರದ ಪ್ರಮುಖ ಆಕ್ಷನ್ ಸೀಕ್ವೆನ್ಸ್‌ಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಇನ್ನು ಕೇವಲ 80 ದಿನಗಳಲ್ಲಿ ಮುಕ್ತಾಯಗೊಳ್ಳಲಿರುವ ಸಣ್ಣ ಭಾಗಗಳು ಮಾತ್ರ ಬಾಕಿ ಇವೆ ಎಂದು ಹೇಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಜುಲೈ 7 ರಿಂದ ಹೈದರಾಬಾದ್‌ನಲ್ಲಿ ಹೊಸ ಶೂಟಿಂಗ್ ಶೆಡ್ಯೂಲ್ ಆರಂಭಿಸಲು ಚಿತ್ರತಂಡ ಸಜ್ಜಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಶೆಡ್ಯೂಲ್‌ನಲ್ಲಿ ನಟ ಮಹೇಶ್ ಬಾಬು ಅವರು ಸುಮಾರು 3,500 ಜೂನಿಯರ್ ಆರ್ಟಿಸ್ಟ್‌ಗಳೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ದೃಶ್ಯಕ್ಕಾಗಿ ಚಿತ್ರತಂಡ ಕಳೆದ ಹಲವು ವಾರಗಳಿಂದ ತಯಾರಿ ನಡೆಸುತ್ತಿದ್ದು, ಈ ಯುದ್ಧದ ಸನ್ನಿವೇಶವು ಎಸ್‌ಎಸ್‌ ರಾಜಮೌಳಿ ಅವರು ಈವರೆಗೆ ಯೋಜಿಸಿದ ಅತಿ ದೊಡ್ಡ ದೃಶ್ಯಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಿರುವ ಈ ದೃಶ್ಯಗಳು ಕೇವಲ ಈ ಬೃಹತ್ ಸೀಕ್ವೆನ್ಸ್‌ನ ಆರಂಭ ಮಾತ್ರ ಎನ್ನಲಾಗಿದೆ.

'ವಾರಣಾಸಿ' ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಇದು ಟೈಮ್ ಟ್ರಾವೆಲಿಂಗ್ ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, ಅಪಾರ ಶಕ್ತಿಯುಳ್ಳ ಕಳೆದುಹೋದ ಕಾಸ್ಮಿಕ್ ಕಲಾಕೃತಿಯನ್ನು ಹುಡುಕಲು ವಿವಿಧ ಕಾಲಘಟ್ಟಗಳಿಗೆ ಪ್ರಯಾಣಿಸುವ ಶಿವನ ಭಕ್ತನ ಸುತ್ತ ಈ ಕಥೆ ಸಾಗಲಿದೆ. ಚಿತ್ರದಲ್ಲಿ ಮಹೇಶ್ ಬಾಬು 'ರುದ್ರ' ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರಿಯಾಂಕಾ ಚೋಪ್ರಾ ಜೋನಸ್ 'ಮಂದಾಕಿನಿ' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಖಳನಾಯಕನಾಗಿ 'ಕುಂಭ' ಎಂಬ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ 'ವಾರಣಾಸಿ' ಏಪ್ರಿಲ್ 7, 2027 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ.

Read More
Next Story