ರಾಜಾ ಶಿವಾಜಿ ಟ್ರೈಲರ್| ಸಿನಿಮಾ ದೃಶ್ಯದ ಬಗ್ಗೆ ಕಿಡಿಕಾರಿದ ಬಿಜೆಪಿ ನಾಯಕ; ಸ್ಪಷ್ಟನೆ ನೀಡಿದ ರಿತೇಶ್
x

'ರಾಜಾ ಶಿವಾಜಿ' ಚಿತ್ರದ ವಾಘ್ ನಖ್ ದೃಶ್ಯದ ಬಗ್ಗೆ ಬಿಜೆಪಿ ನಾಯಕ ಸುರೇಶ್ ನಖುವಾ ಕಿಡಿಕಾರಿದ್ದಾರೆ. 

'ರಾಜಾ ಶಿವಾಜಿ' ಟ್ರೈಲರ್| ಸಿನಿಮಾ ದೃಶ್ಯದ ಬಗ್ಗೆ ಕಿಡಿಕಾರಿದ ಬಿಜೆಪಿ ನಾಯಕ; ಸ್ಪಷ್ಟನೆ ನೀಡಿದ ರಿತೇಶ್

'ರಾಜಾ ಶಿವಾಜಿ' ಚಿತ್ರದ ವಾಘ್ ನಖ್ ದೃಶ್ಯದ ಬಗ್ಗೆ ಬಿಜೆಪಿ ನಾಯಕ ಸುರೇಶ್ ನಖುವಾ ಆಕ್ಷೇಪಕ್ಕೆ ರಿತೇಶ್ ದೇಶ್‌ಮುಖ್ ಸ್ಪಷ್ಟನೆ ನೀಡಿದ್ದಾರೆ. ಇತಿಹಾಸದ ವಿವಾದದ ಬಗ್ಗೆ ನಟನ ಉತ್ತರ ಇಲ್ಲಿದೆ.


Click the Play button to hear this message in audio format

ನಟ ರಿತೇಶ್ ದೇಶ್‌ಮುಖ್ ನಿರ್ದೇಶಿಸಿ, ನಟಿಸುತ್ತಿರುವ 'ರಾಜಾ ಶಿವಾಜಿ' ಚಿತ್ರದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ವಿವಾದವೊಂದು ಸೃಷ್ಟಿಯಾಗಿದೆ. ಚಿತ್ರದಲ್ಲಿನ 'ವಾಘ್ ನಖ್' (ಹುಲಿ ಉಗುರು) ಬಳಸುವ ದೃಶ್ಯದ ಕುರಿತು ಬಿಜೆಪಿ ನಾಯಕ ಸುರೇಶ್ ನಖುವಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ದಾಖಲೆಗಳ ಪ್ರಕಾರ, ಛತ್ರಪತಿ ಶಿವಾಜಿ ಮಹಾರಾಜರು ಪ್ರತಾಪಗಡದಲ್ಲಿ ಅಫ್ಜಲ್ ಖಾನ್‌ನನ್ನು ಭೇಟಿಯಾಗುವಾಗ 'ವಾಘ್ ನಖ್' ಆಯುಧವನ್ನು ತಮ್ಮ ಉಡುಪಿನೊಳಗೆ ಗುಪ್ತವಾಗಿ ಅಡಗಿಸಿಟ್ಟುಕೊಂಡಿದ್ದರು. ಆದರೆ ಚಿತ್ರದ ಟ್ರೈಲರ್‌ನಲ್ಲಿ ಶಿವಾಜಿ ಮಹಾರಾಜರು ಈ ಆಯುಧವನ್ನು ಬಹಿರಂಗವಾಗಿ ಕೈಯಲ್ಲಿ ಹಿಡಿದಿರುವುದು ಕಂಡುಬಂದಿದೆ. ಈ ದೃಶ್ಯವು ಇತಿಹಾಸವನ್ನು ತಿರುಚುವಂತಿದೆ ಮತ್ತು ಮಹಾರಾಷ್ಟ್ರದ ಹೆಮ್ಮೆಗೆ ಅವಮಾನ ಮಾಡುವಂತಿದೆ ಎಂದು ಸುರೇಶ್ ನಖುವಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ.

'ರಾಜಾ ಶಿವಾಜಿ' ಚಿತ್ರದ ಟ್ರೈಲರ್

ಈ ಟೀಕೆಗೆ ಅತ್ಯಂತ ವಿನಮ್ರವಾಗಿ ಪ್ರತಿಕ್ರಿಯಿಸಿರುವ ರಿತೇಶ್ ದೇಶ್‌ಮುಖ್, ಮೇ 1 ರಂದು ಚಲನಚಿತ್ರ ಬಿಡುಗಡೆಯಾಗಲಿದ್ದು, ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರವಿದೆ ಎಂದು ತಿಳಿಸಿದ್ದಾರೆ. ದಯವಿಟ್ಟು ಕುಟುಂಬದೊಂದಿಗೆ ಸಿನಿಮಾ ನೋಡಿ ಆನಂದಿಸಿ ಎಂದು ಅವರು ವಿನಂತಿಸಿದ್ದಾರೆ.

ಆದರೆ ರಿತೇಶ್ ಅವರ ಈ ಸ್ಪಷ್ಟನೆಯನ್ನು ಒಪ್ಪದ ಬಿಜೆಪಿ ನಾಯಕ ನಖುವಾ, ಇದೊಂದು ಕೇವಲ ಮಾರ್ಕೆಟಿಂಗ್ ತಂತ್ರ ಎಂದು ಟೀಕಿಸಿದ್ದಾರೆ. ಇತಿಹಾಸದ ವಿಷಯದಲ್ಲಿ ಪ್ರಶ್ನೆಗಳು ಏಳಬಾರದು, ಬದಲಿಗೆ ಟ್ರೈಲರ್ ಮೂಲಕವೇ ಸ್ಪಷ್ಟನೆ ಸಿಗಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಮೇ 1 ರಂದು ಮರಾಠಿ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ತಜ್ಞರ ಪ್ರಕಾರ ಹುಲಿ ಉಗುರಿನಿಂದ ಅಫ್ಜಲ್ ಖಾನ್ ಹತ್ಯೆ ನಡೆದದ್ದು ಹೇಗೆ?

ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅನಿರುದ್ಧ ದೇಶಪಾಂಡೆ ಅವರ ಪ್ರಕಾರ, ಸಿನಿಮಾ ಇತಿಹಾಸಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಶಿವಾಜಿ ಮಹಾರಾಜರು ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲು ಆಯುಧವನ್ನು ಗುಪ್ತವಾಗಿಡುವುದು ತಾರ್ಕಿಕವಾಗಿತ್ತು. ಇಲ್ಲದಿದ್ದರೆ ಅಫ್ಜಲ್ ಖಾನ್ ಭೇಟಿಯಿಂದ ಹಿಂದೆ ಸರಿಯುತ್ತಿದ್ದರು. ಆದರೆ ಮುಖ್ಯವಾಹಿನಿಯ ಸಿನಿಮಾಗಳು ಹಣ ಗಳಿಸಲು ಕಾಲ್ಪನಿಕ ಅಂಶಗಳನ್ನು ಸೇರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪುಣೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಹುಲ್ ಮಗರ್ ಅವರ ಪ್ರಕಾರ, ಅಫ್ಜಲ್ ಖಾನ್ ಶಿವಾಜಿ ಮಹಾರಾಜರಿಗಿಂತ ಎತ್ತರ ಮತ್ತು ಬಲಿಷ್ಠ ದೇಹದಾರ್ಢ್ಯ ಹೊಂದಿದ್ದರಿಂದ, ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡುವುದು ಅನಿವಾರ್ಯವಾಗಿತ್ತು. ಆದ್ದರಿಂದ ಬಹಿರಂಗವಾಗಿ ಆಯುಧ ತೋರಿಸುವುದು ಅಸಾಧ್ಯ. ಆದರೂ ಇದನ್ನು ಸಾಕ್ಷ್ಯಚಿತ್ರದಂತೆ ನೋಡದೆ ಸಿನಿಮಾದಂತೆ ನೋಡಬೇಕು ಎಂದು ಸಲಹೆ ನೀಡಿದ್ದಾರೆ.

ಹುಲಿ ಉಗುರಿನಿಂದಲೇ ಕೊಂದರೇ ಎಂಬ ಬಗ್ಗೆಯೂ ತಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ಕೆಲವರು ಅವರು ಹುಲಿ ಉಗುರು ಮತ್ತು ಒಂದು ಬಗೆಯ ಚಾಕು ಎರಡನ್ನೂ ಬಳಸಿದ್ದಾರೆ ಎನ್ನುತ್ತಾರೆ. ಇನ್ನು ಕೆಲವರು ಹುಲಿ ಉಗುರನ್ನು ಮುಷ್ಟಿಯಲ್ಲಿ ಮರೆಮಾಡುವುದು ಕಷ್ಟ, ಆದ್ದರಿಂದ ಅವರು ಬೇರೆ ಯಾವುದಾದರೂ ಸಣ್ಣ ಆಯುಧ ಬಳಸಿರಬಹುದು ಅಥವಾ ಉಂಗುರದಂತೆ ಕಾಣುವ ಆಯುಧ ಬಳಸಿರಬಹುದು ಎಂದು ಅಭಿಪ್ರಾಯಪಡುತ್ತಾರೆ.

ಒಟ್ಟಾರೆಯಾಗಿ, ಶಿವಾಜಿ ಮಹಾರಾಜರು ಅಫ್ಜಲ್ ಖಾನನನ್ನು ಕೊಂದಿದ್ದು ಸತ್ಯವಾದರೂ, ಆಯುಧವನ್ನು ತೋರಿಸಿ ಕೊಂದರೇ ಎಂಬುದು ಚರ್ಚಾಸ್ಪದ. ಆದರೆ ಚಿತ್ರವು ಕಲೆಯಾಗಿರುವುದರಿಂದ ಅದಕ್ಕೆ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ ಎಂಬುದು ತಜ್ಞರ ತೀರ್ಮಾನವಾಗಿದೆ.

Read More
Next Story