Prakash Raj| ರಾಮಾಯಣ ಹಾಗೂ ನರಮೇಧದ ಕುರಿತು ವಿವಾದಾತ್ಮಕ ಹೇಳಿಕೆ: ನಟ ಪ್ರಕಾಶ್ ರಾಜ್‌ಗೆ ಕಾನೂನು ಸಂಕಷ್ಟ
x

ರಾಮಾಯಣ ಹಾಗೂ ನರಮೇಧದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಪ್ರಕಾಶ್ ರಾಜ್

Prakash Raj| ರಾಮಾಯಣ ಹಾಗೂ ನರಮೇಧದ ಕುರಿತು ವಿವಾದಾತ್ಮಕ ಹೇಳಿಕೆ: ನಟ ಪ್ರಕಾಶ್ ರಾಜ್‌ಗೆ ಕಾನೂನು ಸಂಕಷ್ಟ

ರಾಮಾಯಣ ಹಾಗೂ ನರಮೇಧದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಅವರೀಗ ಕಾನೂನು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.


Click the Play button to hear this message in audio format

ಖ್ಯಾತ ನಟ ಪ್ರಕಾಶ್ ರಾಜ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದಾರೆ. ರಾಮಾಯಣ ಹಾಗೂ ದೇಶದ ಧಾರ್ಮಿಕ ಸಾಮರಸ್ಯದ ಕುರಿತು ಅವರು ನೀಡಿರುವ ಹೇಳಿಕೆಗಳು ಈಗ ದೊಡ್ಡ ಮಟ್ಟದ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿವೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, "ಶ್ರೀರಾಮ ಉತ್ತರ ಭಾರತದವನು ಹಾಗೂ ರಾವಣ ದಕ್ಷಿಣ ಭಾರತದ ಬುಡಕಟ್ಟು ಜನಾಂಗದವನು. ಅವರಿಬ್ಬರ ನಡುವಿನ ಸಂಘರ್ಷ ಆರಂಭವಾಗಿದ್ದೇ ಹಣ್ಣುಗಳ ಕಳ್ಳತನದ ವಿಚಾರವಾಗಿ" ಎಂಬ ವಿಚಿತ್ರ ವಿಶ್ಲೇಷಣೆಯನ್ನು ನೀಡಿದ್ದರು. ರಾಮಾಯಣದಂತಹ ಪವಿತ್ರ ಇತಿಹಾಸದ ಕುರಿತು ಇಂತಹ ಹೇಳಿಕೆ ನೀಡಿದ್ದು ಕೋಟ್ಯಾಂತರ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ದೇಶದಲ್ಲಿ ನರಮೇಧದ ತಯಾರಿ ನಡೆಯುತ್ತಿದೆ

ರಾಮಾಯಣದ ಹೇಳಿಕೆಯ ಬೆನ್ನಲ್ಲೇ ಪ್ರಕಾಶ್ ರಾಜ್ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. "ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ನರಮೇಧಕ್ಕೆ ನಡೆಯುತ್ತಿರುವ ಸಿದ್ಧತೆಯಾಗಿದೆ. ಮುಸ್ಲಿಮರನ್ನು, ಬುಡಕಟ್ಟು ಜನರನ್ನು ಹಾಗೂ ಅಲ್ಪಸಂಖ್ಯಾತರನ್ನು ನಿರ್ಮೂಲನೆ ಮಾಡಲು ಸಂಚು ರೂಪಿಸಲಾಗುತ್ತಿದೆ" ಎಂದು ಅವರು ಆರೋಪಿಸಿದ್ದಾರೆ. ಈ ಹೇಳಿಕೆಯು ದೇಶದ ಕಾನೂನು ಸುವ್ಯವಸ್ಥೆ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ ಎಂಬ ಆರೋಪಗಳು ಕೇಳಿಬಂದಿವೆ.

ನಟನ ವಿರುದ್ಧ ದಾಖಲಾಯಿತೇ ಕ್ರಿಮಿನಲ್ ಕೇಸ್?

ಮೂಲಗಳ ಪ್ರಕಾರ, ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ ಆರೋಪದ ಮೇಲೆ ಪ್ರಕಾಶ್ ರಾಜ್ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಪ್ರಚೋದನಕಾರಿ ಭಾಷಣ ಹಾಗೂ ಧಾರ್ಮಿಕ ದ್ವೇಷ ಹರಡುವ ಪ್ರಯತ್ನದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ಈ ಹಿಂದೆಯೂ ಚಂದ್ರಯಾನ-3 ಮಿಷನ್ ಬಗ್ಗೆ ಅಣಕವಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ಅವರು ಕಾನೂನು ಸಂಕಷ್ಟ ಎದುರಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಪ್ರಕಾಶ್ ರಾಜ್ ಅವರ ಈ ಹೇಳಿಕೆಗಳ ವಿರುದ್ಧ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. "ಅಭಿನಯದಲ್ಲಿ ಪರಿಣಿತಿ ಹೊಂದಿರುವ ನಟರು ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಸದಾ ಟೀಕೆ ಮಾಡುವ ಪ್ರಕಾಶ್ ರಾಜ್, ಈ ಬಾರಿ ಧರ್ಮ ಮತ್ತು ಇತಿಹಾಸದ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Read More
Next Story