
ಕರ್ನಾಟಕದಲ್ಲಿ ಲಾಯರ್ ಜಗದೀಶ್ ಹೊಸ ಪಕ್ಷ ಸ್ಥಾಪನೆಯ ಘೋಷಣೆ; ವಿಜಯ್ ಹಾದಿಯಲ್ಲಿ ವಕೀಲ
ತಮಿಳುನಾಡಿನಲ್ಲಿ ವಿಜಯ್ ಗೆಲುವಿನ ಬೆನ್ನಲ್ಲೇ ಕರ್ನಾಟಕದಲ್ಲಿ ಲಾಯರ್ ಜಗದೀಶ್ ಹೊಸ ಪಕ್ಷ ಘೋಷಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಮಾನ್ಯ ಜನರೊಂದಿಗೆ ಹೊಸ ಸರ್ಕಾರ ರಚಿಸುವುದು ಅವರ ಗುರಿ.
ತಮಿಳುನಾಡಿನಲ್ಲಿ ನಟ ವಿಜಯ್ ಅವರ 'ಟಿವಿಕೆ' ಪಕ್ಷವು ಐತಿಹಾಸಿಕ ಜಯಭೇರಿ ಬಾರಿಸಿದ ಬೆನ್ನಲ್ಲೇ, ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರು ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ವಿಷಯವನ್ನು ಹಂಚಿಕೊಂಡಿರುವ ಜಗದೀಶ್, ಸಾಮಾನ್ಯ ಜನರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಮೂಲಕ ಹೊಸ ಸರ್ಕಾರ ರಚಿಸುವ ಗುರಿ ಹೊಂದಿದ್ದಾರೆ.
ರಾಜ್ಯದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆಡಳಿತದಿಂದ ಜನರು ಬೇಸತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಭ್ರಷ್ಟಾಚಾರ, ನಿರುದ್ಯೋಗ ಮತ್ತು ಬೆಲೆ ಏರಿಕೆಯ ವಿರುದ್ಧ ಹೋರಾಡಲು ಹೊಸ ಪರ್ಯಾಯ ಶಕ್ತಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಡಿಎಂಕೆಗಳಂತಹ ಬಲಿಷ್ಠ ಪಕ್ಷಗಳ ನಡುವೆ ನಟ ವಿಜಯ್ ಹೇಗೆ ಮೂರನೇ ಆಯ್ಕೆಯಾಗಿ ಯಶಸ್ಸು ಕಂಡರೋ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕ್ರಾಂತಿ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿದ್ದು, ಈಗಿನಿಂದಲೇ ಸಾಮಾನ್ಯ ವರ್ಗದ ಜನರನ್ನು ಸಂಘಟಿಸಿ ರಾಜಕೀಯ ಬದಲಾವಣೆ ತರುವುದಾಗಿ ಅವರು ಪಣತೊಟ್ಟಿದ್ದಾರೆ. ಶೀಘ್ರದಲ್ಲೇ ಪಕ್ಷದ ಹೆಸರು ಮತ್ತು ಮುಂದಿನ ಕಾರ್ಯಸೂಚಿಯನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿರುವ ಜಗದೀಶ್ ಅವರ ಈ ನಡೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಸಣ್ಣ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಸಾಮಾನ್ಯ ಜನರ ಬೆಂಬಲದೊಂದಿಗೆ ತಾವು ಕಟ್ಟಲಿರುವ ಪಕ್ಷವು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

