
ಜನ ನಾಯಕನ್' ಚಲನಚಿತ್ರ ಸೋರಿಕೆ ಪ್ರಕರಣ: ದತ್ತಾಂಶ ಕದ್ದ ಎಡಿಟರ್ ಸೇರಿ ಮೂವರು ಆರೋಪಿಗಳ ಬಂಧನ.
Jana Nayagan| ಜನ ನಾಯಗನ್ ಚಲನಚಿತ್ರ ಸೋರಿಕೆ ಪ್ರಕರಣ: ಮೂವರು ಆರೋಪಿಗಳ ಬಂಧನ
ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ದತ್ತಾಂಶ ಕಳ್ಳತನ ಮತ್ತು ಆನ್ಲೈನ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಕ್ರೈಂ ಪೊಲೀಸರು ಫ್ರೀಲಾನ್ಸ್ ಎಡಿಟರ್ ಸೇರಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಸೈಬರ್ ಕ್ರೈಂ ವಿಭಾಗವು ನಟ ವಿಜಯ್ ನಟನೆಯ 'ಜನ ನಾಯಗನ್' ಚಲನಚಿತ್ರದ ದತ್ತಾಂಶ ಕಳ್ಳತನ ಮತ್ತು ಆನ್ಲೈನ್ ಸೋರಿಕೆಗೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಲ್ಲಿ ಫ್ರೀಲಾನ್ಸ್ ಅಸಿಸ್ಟೆಂಟ್ ಎಡಿಟರ್ ಕೂಡ ಸೇರಿದ್ದು, ಇವರು ಚಿತ್ರದ ಪ್ರಮುಖ ದೃಶ್ಯಗಳನ್ನು ಸ್ಟುಡಿಯೋದಿಂದಲೇ ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 15 ರಂದು ತಾಂತ್ರಿಕ ವಿಶ್ಲೇಷಣೆ ಮತ್ತು ಡಿಜಿಟಲ್ ಪುರಾವೆಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 11 ರಂದು ಪೈರೇಟೆಡ್ ವಿಷಯವನ್ನು ಹಂಚಿಕೊಂಡಿದ್ದ ಇತರ ಆರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಬಂಧಿತರ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.
ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಮುಖ್ಯ ಆರೋಪಿ ಬೇರೊಂದು ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಎಡಿಟಿಂಗ್ ಸ್ಟುಡಿಯೋವೊಂದರಲ್ಲಿ ಚಿತ್ರದ ರೀಲ್ಗಳನ್ನು ಅನಧಿಕೃತವಾಗಿ ಪ್ರವೇಶಿಸಿ ದತ್ತಾಂಶವನ್ನು ಕದ್ದಿದ್ದ. ನಂತರ ಆ ದತ್ತಾಂಶವನ್ನು ಚಲನಚಿತ್ರ ರೂಪಕ್ಕೆ ಬದಲಿಸಿ ತನ್ನ ಸಹಚರರೊಂದಿಗೆ ಹಂಚಿಕೊಂಡಿದ್ದನು, ಇದು ಇಡೀ ಅಂತರ್ಜಾಲದಲ್ಲಿ ಸಿನಿಮಾ ಸೋರಿಕೆಯಾಗಲು ಕಾರಣವಾಯಿತು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕ್ಲೌಡ್ ಮೂಲಕ ಹಂಚಿಕೆ
ತನಿಖೆಯಲ್ಲಿ ಆರೋಪಿಗಳು ಕ್ಲೌಡ್ ಸ್ಟೋರೇಜ್ ಪ್ಲಾಟ್ಫಾರ್ಮ್ಗಳು ಮತ್ತು ಶೇರ್ಡ್ ಡ್ರೈವ್ ಲಿಂಕ್ಗಳ ಮೂಲಕ ಚಿತ್ರದ ನಕಲು ಪ್ರತಿಗಳನ್ನು ಹರಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ 300ಕ್ಕೂ ಹೆಚ್ಚು ಅಕ್ರಮ ಲಿಂಕ್ಗಳನ್ನು ತಡೆಗಟ್ಟುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಇನ್ನೂ ಕೆಲವು ಲಿಂಕ್ಗಳನ್ನು ತೆಗೆದುಹಾಕುವ ಕೆಲಸ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳು, ವೆಬ್ಸೈಟ್ಗಳು ಮತ್ತು ಫೈಲ್ ಶೇರ್ ಮಾಡುವ ಸೇವೆಗಳ ಮೇಲೆ ಸೈಬರ್ ವಿಂಗ್ ನಿಗಾ ಇಟ್ಟಿದ್ದು, ಇನ್ನಷ್ಟು ಮಂದಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಸೈಬರ್ ಕ್ರೈಂ ವಿಭಾಗವು, ಪೈರೇಟೆಡ್ ಚಿತ್ರಗಳನ್ನು ಡೌನ್ಲೋಡ್ ಮಾಡುವುದು, ಸ್ಟ್ರೀಮಿಂಗ್ ಮಾಡುವುದು ಅಥವಾ ಇತರರಿಗೆ ಫಾರ್ವರ್ಡ್ ಮಾಡುವುದು ಕಾನೂನುಬಾಹಿರ ಎಂದು ಹೇಳಿದೆ. ಪೈರಸಿಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ. ಜನವರಿ 2026 ಕ್ಕೆ ಬಿಡುಗಡೆಯಾಗಬೇಕಿದ್ದ ವಿಜಯ್ ಅವರ ಈ ಚಿತ್ರವು ಸೆನ್ಸಾರ್ ಮಂಡಳಿಯ ಅನುಮತಿ ಸಿಗದ ಕಾರಣ ಸದ್ಯ ವಿಳಂಬವಾಗಿದೆ.

