
ರಾಜಕೀಯಕ್ಕೆ ಧನುಷ್ ಎಂಟ್ರಿ? ಅಭಿಮಾನಿಗಳ ಮುಂದೆ ಹೇಳಿದ ಮಾತು ವೈರಲ್
ಅಭಿಮಾನಿಗಳ ಐಕ್ಯತೆಯನ್ನು ಸಮಾಜಸೇವೆಗೆ ಬಳಸುವಂತೆ ಕರೆ ನೀಡಿದ ಧನುಷ್ ಅವರ ಭಾಷಣ ರಾಜಕೀಯ ಪ್ರವೇಶದ ಊಹಾಪೋಹಗಳಿಗೆ ಮತ್ತೊಮ್ಮೆ ಕಾರಣವಾಗಿದೆ.
ತಮಿಳು ನಟ ಹಾಗೂ ನಿರ್ದೇಶಕ ಧನುಷ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆಯೇ ಎಂಬ ಊಹಾಪೋಹಗಳು ಮತ್ತೆ ಜೋರಾಗಿವೆ. ಇತ್ತೀಚೆಗೆ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಐಕ್ಯತೆಯನ್ನು ಸಮಾಜಸೇವೆಗೆ ಬಳಸುವಂತೆ ಕರೆ ನೀಡಿದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗೆ ಕಾರಣವಾಗಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಧನುಷ್, "ಇಷ್ಟು ಜನ ಒಂದೇ ಸ್ಥಳದಲ್ಲಿ ಸೇರಿರುವುದು ದೊಡ್ಡ ಶಕ್ತಿ. ಈ ಐಕ್ಯತೆಗೆ ಒಂದು ಉದ್ದೇಶ ಇರಬೇಕು. ಕೇವಲ ಆಡಿಯೋ ಲಾಂಚ್ಗಳು ಅಥವಾ ಅಭಿಮಾನಿ ಸಭೆಗಳಷ್ಟೇ ಅಲ್ಲ, ಸಮಾಜದ ಒಳಿತಿಗಾಗಿ ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಿಮ್ಮ ಸುತ್ತಮುತ್ತಲಿನ ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡು ಸಾಧ್ಯವಾದಷ್ಟು ಸಹಾಯ ಮಾಡಿ. ನಿಮ್ಮ ಬಗ್ಗೆ ಇನ್ನಷ್ಟು ಹೆಮ್ಮೆಪಡುವಂತ ಕೆಲಸ ಮಾಡಿ" ಎಂದು ಹೇಳಿದರು.
ಈ ಹೇಳಿಕೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಧನುಷ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಕೆಲವರು ಅವರ ದೇಹಭಾಷೆ ಮತ್ತು ಭಾಷಣವು ರಾಜಕೀಯದತ್ತ ಹೆಜ್ಜೆ ಇಡುವ ಸೂಚನೆ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ನಟ ವಿಜಯ್ ಅವರ ರಾಜಕೀಯ ಯಶಸ್ಸಿನ ಮೇಲೆ ಧನುಷ್ ಅವರ ಮುಂದಿನ ನಿರ್ಧಾರ ಅವಲಂಬಿತವಾಗಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ಅವರು ವಿಜಯ್ ಅವರ ಟಿವಿಕೆ (TVK) ಪಕ್ಷ ಸೇರಬಹುದೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಆದರೆ ಧನುಷ್ ಇದುವರೆಗೆ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಇದೇ ವೇಳೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಕುರಿತಾದ ಚರ್ಚೆಗಳಿಗೂ ಧನುಷ್ ಪ್ರತಿಕ್ರಿಯೆ ನೀಡಿದರು. ತಮ್ಮ ನಿರ್ದೇಶನದ 'ರಾಯನ್' ಚಿತ್ರಕ್ಕಿಂತ ಉತ್ತಮ ತಮಿಳು ಚಿತ್ರಗಳು ಇದ್ದವು ಎಂದು ಹೇಳಿದ ಅವರು, ಒಂದೇ ವರ್ಷದಲ್ಲಿ ತಮಿಳು ಚಿತ್ರರಂಗಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿರುವುದನ್ನು ಸಂಭ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು. 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಅಭಿನಯಕ್ಕೆ ವಿಶೇಷ ಉಲ್ಲೇಖ ಪಡೆದಿದ್ದ ಧನುಷ್, 'ರಾಯನ್' ಚಿತ್ರವು ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಈ ಪ್ರಶಸ್ತಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

