
ನಟ ದರ್ಶನ್ ಹಾಗೂ ನಿರ್ದೇಶಕ ದಿನಕರ್ ಜೊತೆ ಮಲ್ಲಿಕಾರ್ಜುನ್ (ಸಂಗ್ರಹ ಚಿತ್ರ)
ಎಂಟು ವರ್ಷದ ಬಳಿಕ ನಟ ದರ್ಶನ್ ಮಾಜಿ ಮ್ಯಾನೇಜರ್ ಪ್ರತ್ಯಕ್ಷ; ಸಾಲ ಮಾಡಿದ್ದು ಎಷ್ಟು ಕೋಟಿ ಗೊತ್ತಾ?
ಕೆಲ ಕಾಲ ನೇಪಾಳದಲ್ಲಿ ಸ್ನೇಹಿತನ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಇತ್ತೀಚೆಗೆ ಪಾರ್ಶ್ವವಾಯು ಪೀಡಿತರಾಗಿ ಬೆಡ್ ರೆಸ್ಟ್ನಲ್ಲಿದ್ದೆ. ಆರೋಗ್ಯ ಚೇತರಿಸಿಕೊಂಡ ನಂತರ ಸತ್ಯ ಒಪ್ಪಿಕೊಳ್ಳಲು ಮರಳಿ ಬಂದಿರುವುದಾಗಿ ದರ್ಶನ್ ಮ್ಯಾನೇಜರ್ ಹೇಳಿದ್ದಾರೆ.
ಸ್ಯಾಂಡಲ್ವುಡ್ ನಟ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಸುಮಾರು ಎಂಟು ವರ್ಷಗಳಿಂದ ನಾಪತ್ತೆಯಾಗಿದ್ದ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಬಿ. ಸಂಕನಗೌಡರ ಕೊನೆಗೂ ಪತ್ತೆಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಮಲ್ಲಿಕಾರ್ಜುನ್ ನಾಪತ್ತೆ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿದ್ದವು. ಅವರು ಬದುಕಿದ್ದಾರೋ ಇಲ್ಲವೋ ಎಂಬ ಸಂಶಯಗಳು ಹೆಚ್ಚಾಗಿದ್ದವು.
ಗುರುವಾರ (ಏ.16) ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಯಾವುದೇ ಅಪರಾಧ ಎಸಗಿರಲಿಲ್ಲ. ಬದಲಾಗಿ ಸಾಲಬಾಧೆ ಮತ್ತು ಉದ್ಯಮದಲ್ಲಿನ ನಷ್ಟದಿಂದಾಗಿ ಊರು ಬಿಟ್ಟಿದ್ದೆ. 'ಮೊದಲ ಸಲ' ಸಿನಿಮಾದ ವಿತರಣೆ ಮತ್ತು ಹೋಟೆಲ್ ಉದ್ಯಮದಲ್ಲಿ ಭಾರೀ ನಷ್ಟ ಅನುಭವಿಸಿದ್ದರಿಂದ ಮೈತುಂಬಾ ಸಾಲ ಮಾಡಿಕೊಂಡಿದ್ದೆ. "ನಟ ದರ್ಶನ್ ಅವರ ಬಳಿ 1 ಕೋಟಿ ರೂಪಾಯಿ ಹಣ ಪಡೆದಿದ್ದೆ. ಆದರೆ, ಸಾಲ ತೀರಿಸಲಾಗದೆ ಅವರನ್ನು ಎದುರಿಸುವ ಧೈರ್ಯವಿಲ್ಲದೆ ಅವರ ಮೇಲಿನ ಗೌರವಕ್ಕಾಗಿಯೇ ಯಾರಿಗೂ ತಿಳಿಸದೆ ದೂರ ಹೋದೆ" ಎಂದು ಬಹಿರಂಗಪಡಿಸಿದ್ದಾರೆ.
ಇಷ್ಟು ದಿನ ಎಲ್ಲಿದ್ದರು?
ನಾಪತ್ತೆಯಾಗಿದ್ದ ಈ ಅವಧಿಯಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡಿರುವ ಅವರು, ಕುಂದಾಪುರ, ಸವದತ್ತಿ, ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಉತ್ತರ ಭಾರತದ ಹಲವು ನಗರಗಳಲ್ಲಿ ತಲೆಮರೆಸಿಕೊಂಡಿದ್ದೆ. ಕೆಲವು ಕಾಲ ನೇಪಾಳದಲ್ಲಿ ಸ್ನೇಹಿತನ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಇತ್ತೀಚೆಗೆ ಪಾರ್ಶ್ವವಾಯು ಪೀಡಿತರಾಗಿ ಏಳು ತಿಂಗಳ ಕಾಲ ಬೆಡ್ ರೆಸ್ಟ್ನಲ್ಲಿದ್ದೆ. ಆರೋಗ್ಯ ಚೇತರಿಸಿಕೊಂಡ ನಂತರ ಸತ್ಯ ಒಪ್ಪಿಕೊಳ್ಳಲು ಮರಳಿ ಬಂದಿರುವುದಾಗಿ ತಿಳಿಸಿದರು.
ಹಣ ನಾಪತ್ತೆ ವಿವಾದಕ್ಕೆ ಸ್ಪಷ್ಟನೆ
ನಟ ಅರ್ಜುನ್ ಸರ್ಜಾ ಅವರಿಗೆ 1 ಕೋಟಿ ರೂ. ಮತ್ತು ದರ್ಶನ್ ಅವರಿಗೆ 2 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪಗಳು ನನ್ನ ವಿರುದ್ಧ ಕೇಳಿ ಬಂದಿದ್ದವು. "ನಾನು ಯಾರಿಗೂ ಮೋಸ ಮಾಡಿಲ್ಲ. ಸೋತಿದ್ದೇನೆ ಅಷ್ಟೇ, ಸತ್ತಿಲ್ಲ. ಈಗಾಗಲೇ ಸಾಲ ನೀಡಿದವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ" ಎಂದಿದ್ದಾರೆ.
ಕುಟುಂಬಸ್ಥರು, ಅಭಿಮಾನಿಗಳಿಗೆ ಸಮಾಧಾನ
2018ರಲ್ಲಿ 'ಪ್ರೇಮ ಬರಹ' ಸಿನಿಮಾ ಬಿಡುಗಡೆಯಾದ ನಂತರ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು. ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾದಾಗ, ಮಲ್ಲಿಕಾರ್ಜುನ್ ಅವರ ನಾಪತ್ತೆ ಪ್ರಕರಣವೂ ಯಾವುದಾದರೂ ಅನಾಹುತಕ್ಕೆ ಒಳಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈಗ ಅವರು ಜೀವಂತವಾಗಿ ಮರಳಿ ಬಂದಿರುವುದು ಅವರ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ದೊಡ್ಡ ಸಮಾಧಾನ ತಂದಿದೆ.

