
ರಾಜಕುಮಾರ್ ಹಿರಾನಿ ನಿರ್ದೇಶನದ '3 ಇಡಿಯಟ್ಸ್' ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ
3 ಈಡಿಯಟ್ಸ್ ಸೀಕ್ವೆಲ್ ಫಿಕ್ಸ್: ಮತ್ತೆ ಒಂದಾಗಲಿದ್ದಾರೆ ಆಮೀರ್, ಮಾಧವನ್, ಶರ್ಮನ್
ರಾಜಕುಮಾರ್ ಹಿರಾನಿ ನಿರ್ದೇಶನದ '3 ಇಡಿಯಟ್ಸ್' ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಆಮೀರ್ ಖಾನ್, ಮಾಧವನ್ ಮತ್ತು ಶರ್ಮನ್ ಜೋಶಿ 15 ವರ್ಷಗಳ ನಂತರ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ '3 ಈ ಡಿಯಟ್ಸ್' ಬಿಡುಗಡೆಯಾಗಿ ಹದಿನೈದು ವರ್ಷಗಳು ಕಳೆದರೂ ಅದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗ ಈ ಚಿತ್ರದ ಅಭಿಮಾನಿಗಳಿಗೆ ಒಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರದ ನಿರ್ದೇಶಕ ರಾಜಕುಮಾರ್ ಹಿರಾನಿ ಅವರು ಸೀಕ್ವೆಲ್ ಕೆಲಸಗಳನ್ನು ಅಧಿಕೃತವಾಗಿ ಆರಂಭಿಸಿದ್ದು, ಆಮೀರ್ ಖಾನ್ ಸೇರಿದಂತೆ ಚಿತ್ರದ ಪ್ರಮುಖ ತಾರಾಗಣ ಮತ್ತೆ ಒಂದಾಗುತ್ತಿರುವುದು ಖಚಿತವಾಗಿದೆ.
ವರದಿಗಳ ಪ್ರಕಾರ, ರಾಜಕುಮಾರ್ ಹಿರಾನಿ ಅವರು ಸೀಕ್ವೆಲ್ನ ಕಥೆಯನ್ನು ಈಗಾಗಲೇ ಅಂತಿಮಗೊಳಿಸಿದ್ದಾರೆ. ಮೊದಲ ಭಾಗದ ಅಂತ್ಯದಿಂದ ಸುಮಾರು 15 ವರ್ಷಗಳ ನಂತರ ಈ ಮೂವರು ಸ್ನೇಹಿತರ ಜೀವನ ಹೇಗಿರಲಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುವುದು. ಆಮೀರ್ ಖಾನ್ (ರಾಂಚೊ), ಆರ್. ಮಾಧವನ್ (ಫರ್ಹಾನ್) ಮತ್ತು ಶರ್ಮನ್ ಜೋಶಿ (ರಾಜು) ಅವರು ತಮ್ಮ ಹಳೆಯ ಪಾತ್ರಗಳಲ್ಲೇ ಮಿಂಚಲಿದ್ದು, ನಟಿ ಕರೀನಾ ಕಪೂರ್ ಖಾನ್ ಕೂಡ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕೆಲವು ಸಮಯದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಮೂವರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದ ವೀಡಿಯೊಗಳು ವೈರಲ್ ಆಗಿದ್ದವು, ಇದು ಸೀಕ್ವೆಲ್ ಕುರಿತಾದ ಚರ್ಚೆಗೆ ನಾಂದಿ ಹಾಡಿತ್ತು. ಪ್ರಸ್ತುತ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಈ ವರ್ಷದ ದ್ವಿತೀಯಾರ್ಧದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಶಿಕ್ಷಣ ವ್ಯವಸ್ಥೆಯ ಮೇಲಿನ ಗಂಭೀರ ಸಂದೇಶದ ಜೊತೆಗೆ ಹಾಸ್ಯವನ್ನು ಮೇಳೈಸಿದ್ದ ಮೊದಲ ಭಾಗದಂತೆಯೇ, ಈ ಎರಡನೇ ಭಾಗವೂ ಪ್ರೇಕ್ಷಕರಿಗೆ ಮನರಂಜನೆಯ ಔತಣ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಸದ್ಯಕ್ಕೆ ಈ ಬಗ್ಗೆ ಚಿತ್ರತಂಡದಿಂದ ಹೆಚ್ಚಿನ ಅಧಿಕೃತ ಮಾಹಿತಿ ಹೊರಬೀಳಬೇಕಿದ್ದರೂ, ಈ ಪ್ರಾಜೆಕ್ಟ್ ಈಗ ಆನ್-ಫ್ಲೋರ್ ಹೋಗಲು ಸಂಪೂರ್ಣ ಸಿದ್ಧವಾಗಿದೆ ಎಂದು ಬಾಲಿವುಡ್ ಮೂಲಗಳಿಂದ ತಿಳಿದುಬಂದಿದೆ.
3 ಇಡಿಯಟ್ಸ್ ಕಥೆ ಏನು?
ರಾಜಕುಮಾರ್ ಹಿರಾನಿ ನಿರ್ದೇಶನದ '3 ಇಡಿಯಟ್ಸ್' ಸಿನಿಮಾ ಇಂದಿನ ಯುವಜನತೆ ಮತ್ತು ಪೋಷಕರಿಗೆ ಒಂದು ದೊಡ್ಡ ಸಂದೇಶ ನೀಡಿತ್ತು. ಚೇತನ್ ಭಗತ್ ಅವರ 'ಫೈವ್ ಪಾಯಿಂಟ್ ಸಮ್ವನ್' ಕಾದಂಬರಿ ಆಧಾರಿತ ಈ ಸಿನಿಮಾ ಭಾರತದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವ ಮೂವರು ಸ್ನೇಹಿತರ ಸುತ್ತ ಸುತ್ತುತ್ತದೆ. ಕಥೆಯು ಹತ್ತು ವರ್ಷಗಳ ನಂತರ ಫರ್ಹಾನ್ ಮತ್ತು ರಾಜು ತಮ್ಮ ನಾಪತ್ತೆಯಾದ ಗೆಳೆಯ 'ರಾಂಚೊ' (ಆಮೀರ್ ಖಾನ್) ಅನ್ನು ಹುಡುಕಲು ಹೊರಡುವುದರೊಂದಿಗೆ ಆರಂಭವಾಗುತ್ತದೆ. ಈ ಪಯಣದ ನಡುವೆ ಅವರ ಕಾಲೇಜು ದಿನಗಳ ನೆನಪುಗಳು ಬಿಚ್ಚಿಕೊಳ್ಳುತ್ತವೆ. ರಾಂಚೊ ಒಬ್ಬ ವಿಭಿನ್ನ ವ್ಯಕ್ತಿತ್ವದ ವಿದ್ಯಾರ್ಥಿ. ಆತ ಕೇವಲ ಅಂಕಗಳಿಗಾಗಿ ಓದುವವನಲ್ಲ, ಜ್ಞಾನಕ್ಕಾಗಿ ಕಲಿಯುವವನು. ಆದರೆ ಕಾಲೇಜಿನ ಪ್ರಾಂಶುಪಾಲರಾದ 'ವೈರಸ್' (ಬೋಮನ್ ಇರಾನಿ), ವಿದ್ಯಾರ್ಥಿಗಳನ್ನು ಕೇವಲ ಸ್ಪರ್ಧಾತ್ಮಕ ಯಂತ್ರಗಳಂತೆ ಕಾಣುತ್ತಾರೆ. ಈ ಇಬ್ಬರ ನಡುವಿನ ಸೈದ್ಧಾಂತಿಕ ಸಂಘರ್ಷವೇ ಚಿತ್ರದ ಮುಖ್ಯ ತಿರುಳು.
ತನ್ನ ಗೆಳೆಯರಾದ ಫರ್ಹಾನ್ಗೆ ವೈಲ್ಡ್ಲೈಫ್ ಫೋಟೋಗ್ರಫಿ ಮೇಲಿರುವ ಆಸಕ್ತಿಯನ್ನು ಮತ್ತು ರಾಜುಗೆ ತನ್ನ ಬಡತನದ ಭಯವನ್ನು ಮೆಟ್ಟಿ ನಿಲ್ಲುವಂತೆ ರಾಂಚೊ ಪ್ರೇರೇಪಿಸುತ್ತಾನೆ. 'ಯಶಸ್ಸಿನ ಹಿಂದೆ ಓಡಬೇಡಿ, ಶ್ರೇಷ್ಠತೆಯನ್ನು ಹುಡುಕಿ, ಯಶಸ್ಸು ತಾನಾಗಿಯೇ ನಿಮ್ಮ ಹಿಂದೆ ಬರುತ್ತದೆ' ಎಂಬ ರಾಂಚೊನ ಮಾತು ಪ್ರೇಕ್ಷಕರ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಪ್ರೇಮ ಮತ್ತು ಸ್ನೇಹದ ಜೊತೆಗೆ, ಚಿತ್ರವು ಅತಿ ಒತ್ತಡದ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಅನುಭವಿಸುವ ಮಾನಸಿಕ ಕಿರುಕುಳ ಮತ್ತು ಆತ್ಮಹತ್ಯೆಯಂತಹ ಗಂಭೀರ ವಿಷಯಗಳನ್ನು ಹಾಸ್ಯದ ಮೂಲಕವೇ ಹೃದಯಸ್ಪರ್ಶಿಯಾಗಿ ವಿವರಿಸುತ್ತದೆ.
ಕೊನೆಯಲ್ಲಿ, ರಾಂಚೊ ಕೇವಲ ಒಬ್ಬ ಸಾಮಾನ್ಯ ವಿದ್ಯಾರ್ಥಿಯಲ್ಲ, ಬದಲಿಗೆ ನೂರಾರು ಸಂಶೋಧನೆಗಳನ್ನು ಮಾಡಿದ ವಿಜ್ಞಾನಿ 'ಫುನ್ಸುಖ್ ವಾಂಗ್ಡು' ಎಂಬುದು ತಿಳಿಯುತ್ತದೆ. ಅಂತಿಮವಾಗಿ ಸ್ನೇಹಿತರು ಮತ್ತೆ ಒಂದಾಗುವುದರೊಂದಿಗೆ ಮತ್ತು ಇಷ್ಟಪಟ್ಟ ವೃತ್ತಿಯಲ್ಲಿ ಯಶಸ್ಸು ಗಳಿಸುವುದರೊಂದಿಗೆ ಚಿತ್ರವು ಸುಖಾಂತ್ಯಗೊಳ್ಳುತ್ತದೆ. 'ಆಲ್ ಈಸ್ ವೆಲ್' ಎಂಬ ಮಂತ್ರದ ಮೂಲಕ ಚಿತ್ರವು ಇಂದಿಗೂ ಯುವಜನರ ನೆಚ್ಚಿನ ಚಿತ್ರವಾಗಿ ಉಳಿದಿದೆ.

