ಯಶ್-ರಾಧಿಕಾ ಮನೆಗೆ ತೆರಳಿ ಮದುವೆ ಆಹ್ವಾನ ಪತ್ರಿಕೆ ನೀಡಿದ ಚಿಕ್ಕಣ್ಣ
x

ನಟ ಚಿಕ್ಕಣ್ಣ ಅವರು ಯಶ್-ರಾಧಿಕಾ ಪಂಡಿತ್ ಮನೆಗೆ ತೆರಳಿ ಮದುವೆ ಆಹ್ವಾನ ನೀಡಿದ್ದಾರೆ.

ಯಶ್-ರಾಧಿಕಾ ಮನೆಗೆ ತೆರಳಿ ಮದುವೆ ಆಹ್ವಾನ ಪತ್ರಿಕೆ ನೀಡಿದ ಚಿಕ್ಕಣ್ಣ

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲಿದೆ. ಚಿತ್ರದ ಬಿಡುಗಡೆಗೆ ಕೇವಲ ಮೂರು ದಿನಗಳ ಬಳಿಕ ಚಿಕ್ಕಣ್ಣ ಅವರ ವಿವಾಹ ಇದೆ.


Click the Play button to hear this message in audio format

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಇದೀಗ ತಮ್ಮ ಮದುವೆಯ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ವಿವಾಹಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಆಪ್ತರು ಮತ್ತು ಗಣ್ಯರನ್ನು ಖುದ್ದಾಗಿ ಭೇಟಿಯಾಗಿ ಮದುವೆಯ ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ. ಇದೇ ವೇಳೆ ಚಿಕ್ಕಣ್ಣ ಅವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ನಿವಾಸಕ್ಕೆ ತೆರಳಿ ಮದುವೆಗೆ ಆಹ್ವಾನ ನೀಡಿದ್ದಾರೆ.

ಚಿಕ್ಕಣ್ಣ ಹಾಗೂ ಯಶ್ ಹಲವು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದಾರೆ. ಇಬ್ಬರೂ ‘ಕಿರಾತಕ’, ‘ರಾಜಾಹುಲಿ’ ಮತ್ತು ‘ಮಾಸ್ಟರ್‌ಪೀಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾಗಳಲ್ಲಿನ ಇವರ ಜೋಡಿಯ ಕಾಮಿಡಿ ಹಾಗೂ ಸ್ನೇಹದ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಇದೇ ಸ್ನೇಹ ಚಿತ್ರರಂಗದ ಹೊರಗೂ ಮುಂದುವರಿದಿದೆ. ಯಶ್ ಅವರನ್ನು ಭೇಟಿಯಾದ ಚಿಕ್ಕಣ್ಣ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದಾರೆ. ಆಹ್ವಾನ ಸ್ವೀಕರಿಸಿದ ಯಶ್, ಚಿಕ್ಕಣ್ಣ ಅವರ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.

‘ಟಾಕ್ಸಿಕ್’ ರಿಲೀಸ್ ಬೆನ್ನಲ್ಲೇ ಚಿಕ್ಕಣ್ಣ ಮದುವೆ

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ. ಇದಾದ ಕೇವಲ ಮೂರು ದಿನಗಳ ಬಳಿಕ, ಅಂದರೆ ಆಗಸ್ಟ್ 29ರಂದು ಚಿಕ್ಕಣ್ಣ ಅವರ ವಿವಾಹ ಸಮಾರಂಭ ಆರಂಭವಾಗಲಿದೆ. ಹೀಗಾಗಿ ‘ಟಾಕ್ಸಿಕ್’ ಚಿತ್ರದ ಪ್ರಚಾರ ಹಾಗೂ ಬಿಡುಗಡೆ ಕಾರ್ಯಕ್ರಮಗಳ ನಡುವೆಯೇ ಯಶ್ ಅವರು ಚಿಕ್ಕಣ್ಣ ಅವರ ಮದುವೆಗೆ ಹಾಜರಾಗಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಪಾವನಾ ಜೊತೆ ಚಿಕ್ಕಣ್ಣ ವಿವಾಹ

ಚಿಕ್ಕಣ್ಣ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಈ ವಿವಾಹ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಸೇರಿದಂತೆ ಕೆಲವು ಸಾಂಪ್ರದಾಯಿಕ ಪೂರ್ವ ವಿವಾಹ ಕಾರ್ಯಕ್ರಮಗಳು ಈಗಾಗಲೇ ಆಪ್ತರ ಸಮ್ಮುಖದಲ್ಲಿ ನಡೆದಿವೆ.

ಆಗಸ್ಟ್ 29, 30ರಂದು ಮೈಸೂರಿನಲ್ಲಿ ಮದುವೆ ಸಂಭ್ರಮ

ಚಿಕ್ಕಣ್ಣ ಅವರ ವಿವಾಹ ಸಮಾರಂಭ ಮೈಸೂರಿನ ಸ್ಪೆಕ್ಟ್ರಂ ಹಾಲ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ವಿವಾಹದ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ರಾಜಕೀಯ ನಾಯಕರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಗಣ್ಯರಿಗೆ ಖುದ್ದಾಗಿ ಆಹ್ವಾನ

ತಮ್ಮ ಮದುವೆಗೆ ಗಣ್ಯರನ್ನು ಖುದ್ದಾಗಿ ಆಹ್ವಾನಿಸುತ್ತಿರುವ ಚಿಕ್ಕಣ್ಣ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರ್ಮಲನಂದನಾಥ ಸ್ವಾಮೀಜಿ, ಸಚಿವ ಜಮೀರ್ ಅಹ್ಮದ್ ಖಾನ್, ನಟ ಜಗ್ಗೇಶ್ ಸೇರಿದಂತೆ ಹಲವು ಪ್ರಮುಖರನ್ನು ಭೇಟಿಯಾಗಿ ಆಹ್ವಾನ ನೀಡಿದ್ದಾರೆ. ಕನ್ನಡ ಚಿತ್ರರಂಗದ ಸಹನಟರು ಹಾಗೂ ಆಪ್ತರಿಗೂ ಖುದ್ದಾಗಿ ಆಹ್ವಾನ ನೀಡುತ್ತಿದ್ದಾರೆ.

Read More
Next Story