
'ಭೂಲ್ ಭುಲೈಯಾ' ಸಿನಿಮಾದ ಮಂಜುಲಿಕಾ ಪಾತ್ರ ಕಂಡು ಅಕ್ಷಯ್ ಕುಮಾರ್ ಪುತ್ರ ಆರವ್ 6 ವರ್ಷ ಭಯಬಿದ್ದಿದ್ದರಂತೆ.
Akshay Kumar| ವಿದ್ಯಾ ಬಾಲನ್ ನೋಡಿ ಅಕ್ಷಯ್ ಕುಮಾರ್ ಪುತ್ರ ಆರು ವರ್ಷ ಭಯ ಬಿದ್ದಿದ್ದೇಕೆ?
'ಭೂಲ್ ಭುಲೈಯಾ' ಸಿನಿಮಾದ ಮಂಜುಲಿಕಾ ಪಾತ್ರ ಕಂಡು ಅಕ್ಷಯ್ ಕುಮಾರ್ ಪುತ್ರ ಆರವ್ 6 ವರ್ಷ ಭಯಬಿದ್ದಿದ್ದರಂತೆ. ಈ ಆಸಕ್ತಿದಾಯಕ ವಿಷಯವನ್ನು ಅಕ್ಷಯ್ ತಮ್ಮ 'ಭೂತ್ ಬಂಗ್ಲಾ' ಚಿತ್ರದ ಪ್ರಚಾರದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಭೂಲ್ ಭುಲೈಯಾ' ಸಿನಿಮಾದಲ್ಲಿ ನಟಿ ವಿದ್ಯಾ ಬಾಲನ್ ನಿರ್ವಹಿಸಿದ್ದ 'ಮಂಜುಲಿಕಾ' ಪಾತ್ರ ನೋಡಿ ಅಕ್ಷಯ್ ಅವರ ಪುತ್ರ ಆರವ್ ಕುಮಾರ್ ಸುಮಾರು ಆರು ವರ್ಷಗಳ ಕಾಲ ಆ ನಟಿಯನ್ನು ಕಂಡು ಬೆದರಿ ಓಡುತ್ತಿದ್ದ ಎಂದು ಅಕ್ಷಯ್ ಕುಮಾರ್ ಅವರು ಬಹಿರಂಗಪಡಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ 'ಭೂತ್ ಬಂಗ್ಲಾ' ಚಿತ್ರದ ಪ್ರಚಾರದ ವೇಳೆ ಅಕ್ಷಯ್ ಕುಮಾರ್ ಈ ಸ್ವಾರಸ್ಯಕರ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವಿದ್ಯಾ ಬಾಲನ್ ಅವರು ಮನೆಗೆ ಬಂದಾಗಲೆಲ್ಲಾ ಅವರನ್ನು ಮಂಜುಲಿಕಾ ಎಂದೇ ಭಾವಿಸುತ್ತಿದ್ದ ಆರವ್, ಭಯದಿಂದ ಅವರ ಕಣ್ಣುಗಳನ್ನು ನೋಡಲು ಕೂಡ ಹಿಂಜರಿಯುತ್ತಿದ್ದ ಮತ್ತು ಆಕೆಯನ್ನು ಭೇಟಿಯಾಗಲು ನಿರಾಕರಿಸುತ್ತಿದ್ದ ಎಂದು ಅಕ್ಷಯ್ ನೆನಪಿಸಿಕೊಂಡಿದ್ದಾರೆ.
ತಮ್ಮ ಮಗನ ಮನಸ್ಸಿನಲ್ಲಿದ್ದ ಈ ಭಯವನ್ನು ಹೋಗಲಾಡಿಸಲು ಅಕ್ಷಯ್ ಕುಮಾರ್ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಸಿನಿಮಾ ಎನ್ನುವುದು ಕೇವಲ ನಟನೆ ಮತ್ತು ಕಥೆ ಎಂಬ ಬಗ್ಗೆ ಅದೆಷ್ಟೇ ವಿವರಿಸಿದರೂ, ಆರವ್ ಮನಸ್ಸಿನಿಂದ ಮಂಜುಲಿಕಾಳ ಚಿತ್ರಣ ಮಾಸಿಹೋಗಿರಲಿಲ್ಲ. "ಅವರು ಮಂಜುಲಿಕಾ ಅಲ್ಲ, ವಿದ್ಯಾ ಬಾಲನ್ ಎಂಬ ಒಳ್ಳೆಯ ವ್ಯಕ್ತಿ" ಎಂದು ಅಕ್ಷಯ್ ಪದೇ ಪದೇ ಸಮಾಧಾನಪಡಿಸಿದರೂ, ಆರವ್ ಅದನ್ನು ನಂಬಲು ಸಿದ್ಧನಿರಲಿಲ್ಲ. ಸುಮಾರು ಆರು ವರ್ಷಗಳ ಕಾಲ ಈ ಮಾನಸಿಕ ಭಯ ಆತನನ್ನು ಕಾಡಿತ್ತು ಎಂದು ಅಕ್ಷಯ್ ಕುಮಾರ್ ವಿವರಿಸಿದ್ದಾರೆ.
ನಿರ್ದೇಶಕ ಪ್ರಿಯದರ್ಶನ್ ಅವರೊಂದಿಗೆ ದೀರ್ಘ ಕಾಲದ ನಂತರ ಅಕ್ಷಯ್ ಕುಮಾರ್ 'ಭೂತ್ ಬಂಗ್ಲಾ' ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಬಾರಿ ಮಕ್ಕಳನ್ನು ಭಯಪಡಿಸದಂತೆ ಎಚ್ಚರಿಕೆ ವಹಿಸಿದ್ದಾರೆ. 'ಭೂಲ್ ಭುಲೈಯಾ' ಒಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದರೆ, 'ಭೂತ್ ಬಂಗ್ಲಾ' ಒಂದು ಹಾರರ್ ಫ್ಯಾಂಟಸಿ ಚಿತ್ರವಾಗಿದ್ದು, ಇದು ಡಿಸ್ನಿ ಸಿನಿಮಾಗಳ ಮಾದರಿಯಲ್ಲಿ ಮಕ್ಕಳಿಗೂ ಇಷ್ಟವಾಗುವಂತೆ ಇರಲಿದೆ ಎಂದು ಅಕ್ಷಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಹೊಸ ಚಿತ್ರವು ಕೇವಲ ಭಯ ಹುಟ್ಟಿಸದೆ, ಎಲ್ಲಾ ವಯೋಮಾನದವರಿಗೆ ಮನರಂಜನೆ ನೀಡಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

