
ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಅಮೀರ್ ಖಾನ್ ಸಾಕ್ಷ್ಯಚಿತ್ರ
ರಾಷ್ಟ್ರಪತಿ ದ್ರೌಪದಿ ಮುರ್ಮು ಬಯೋಪಿಕ್ ಗಾಗಿ ಅಮೀರ್ ಖಾನ್ ಸಾಥ್
ಅಮೀರ್ ಖಾನ್ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಭಟ್ಕಳ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಆಧಾರಿತ ಪ್ರೇರಣಾದಾಯಿ ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಧನೆ ಮತ್ತು ಸ್ಫೂರ್ತಿದಾಯಕ ಜೀವನದ ಕುರಿತು ಮಹತ್ವದ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದ್ದು, ಬಾಲಿವುಡ್ನ ಪ್ರಸಿದ್ಧ ಸಂಸ್ಥೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಈ ಯೋಜನೆಗೆ ಬೆಂಬಲ ನೀಡುತ್ತಿದೆ. ಈ ಹಿಂದೆ ಸಾಮಾಜಿಕ ಕಾಳಜಿಯ ಉಳ್ಳ 'ರುಬಾರು ರೋಶ್ನಿ' ಚಿತ್ರವನ್ನು ನಿರ್ದೇಶಿಸಿದ್ದ ಖ್ಯಾತ ಚಲನಚಿತ್ರ ನಿರ್ಮಾಪಕಿ ಹಾಗೂ ಲೇಖಕಿ ಸ್ವಾತಿ ಚಕ್ರವರ್ತಿ ಭಟ್ಕಳ್ ಅವರು ಈ ಹೊಸ ಸಾಕ್ಷ್ಯಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಒಡಿಶಾದ ಅತ್ಯಂತ ಸಾಮಾನ್ಯ ಹಳ್ಳಿಯೊಂದರಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನದವರೆಗೆ ದ್ರೌಪದಿ ಮುರ್ಮು ಅವರು ನಡೆದು ಬಂದ ಹಾದಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗುತ್ತಿದೆ. ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿ ಹಾಗೂ ಈ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರ ವೈಯಕ್ತಿಕ ಜೀವನದ ಏಳುಬೀಳುಗಳು, ಎದುರಿಸಿದ ಸವಾಲುಗಳು, ವೈಯಕ್ತಿಕ ನಷ್ಟಗಳು ಹಾಗೂ ಸಾರ್ವಜನಿಕ ಸೇವೆಗೆ ಅವರು ನೀಡಿದ ಕೊಡುಗೆಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ.
ಚಿತ್ರಕ್ಕೆ ಮತ್ತಷ್ಟು ನೈಜತೆ ಹಾಗೂ ಸಾಂಸ್ಕೃತಿಕ ಸೊಗಡನ್ನು ನೀಡುವ ಉದ್ದೇಶದಿಂದ ಒಡಿಶಾದಲ್ಲಿರುವ ರಾಷ್ಟ್ರಪತಿಗಳ ಸ್ವಂತ ಗ್ರಾಮದಲ್ಲೇ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ನಡೆಸಲಾಗಿದೆ. ಅಷ್ಟೇ ಅಲ್ಲದೆ, ದ್ರೌಪದಿ ಮುರ್ಮು ಅವರ ಜೀವನದ ವಿವಿಧ ಹಂತಗಳನ್ನು ಪರದೆಯ ಮೇಲೆ ತರಲು ಸ್ಥಳೀಯ ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಹಳೆಯ ದಾಖಲೆಗಳು, ನೈಜ ಸ್ಥಳಗಳು ಮತ್ತು ನಾಟಕೀಯ ಮರುಸೃಷ್ಟಿಗಳ ಮೂಲಕ ಈ ಸಾಕ್ಷ್ಯಚಿತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಲಾಗುತ್ತಿದೆ.
ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸಂಬಂಧಗಳ ಕಥೆಗಳಿಗೆ ಹೆಸರಾಗಿರುವ ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್, ಈ ಸಾಕ್ಷ್ಯಚಿತ್ರದ ಮೂಲಕ ದೇಶದ ಕೋಟ್ಯಂತರ ಜನರಿಗೆ ಪ್ರೇರಣೆಯಾಗಬಲ್ಲ ದ್ರೌಪದಿ ಮುರ್ಮು ಅವರ ಅದಮ್ಯ ಚೇತನ ಮತ್ತು ಸಾಧನೆಯ ಕಥೆಯನ್ನು ಜಗತ್ತಿಗೆ ಪರಿಚಯಿಸುವ ವಿಶ್ವಾಸ ಹೊಂದಿದೆ.

