
ಸಾಂದರ್ಭಿಕ ಚಿತ್ರ
KEA : ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ 'ಸೀಟು ಹಂಚಿಕೆ ಮಂಥನ' ಕಾರ್ಯಕ್ರಮ!
ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ ಕಾಲೇಜುಗಳನ್ನೂ ಮಂಥನಕ್ಕೆ ಸೇರಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಆಪ್ಷನ್ ಎಂಟ್ರಿ ಮತ್ತು ಕೌನ್ಸೆಲಿಂಗ್ ಬಗ್ಗೆ ಜಾಗೃತಿ ಮೂಡಿಸುವ ಸಿಇಟಿ ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಈ ಬಾರಿ ಎಂಜಿನಿಯರಿಂಗ್ ಮಾತ್ರವಲ್ಲದೆ ವೈದ್ಯಕೀಯ ಕಾಲೇಜುಗಳಲ್ಲಿಯೂ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.
ಈ ಸಂಬಂಧ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ, ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರ ಬರೆದಿದ್ದು, ಮೇ ತಿಂಗಳ ಎರಡನೇ ವಾರದಲ್ಲಿ ಎರಡು ದಿನ ಮಂಥನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಜಾಗೃತಿ ಮೂಡಿಸಲು ಮಂಥನ ಕಾರ್ಯಕ್ರಮ
ಆಪ್ಷನ್ ಎಂಟ್ರಿ ವಿಷಯದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತಪ್ಪು ಮಾಡುತ್ತಿದ್ದಾರೆಂದು ಕಳೆದ ವರ್ಷ ದೂರುಗಳು ಬಂದಾಗ ಉನ್ನತ ಶಿಕ್ಷಣ ಸಚಿವರು ಈ ರೀತಿ ಜಾಗೃತಿ ಮೂಡಿಸುವ ಮಂಥನ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದರು. ಆ ಪ್ರಕಾರ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಕುರಿತ ಒಂದು ದಿನದ ಮಂಥನ ನಡೆದಿತ್ತು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿತ್ತು. ಹೀಗಾಗಿ ಈ ಬಾರಿ ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ ಕಾಲೇಜುಗಳನ್ನೂ ಮಂಥನಕ್ಕೆ ಸೇರಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೇ 9ಕ್ಕೆ ಕೌನ್ಸೆಲಿಂಗ್
ಈ ಬಾರಿ ಎರಡು ದಿನ ಅತ್ಯಂತ ವ್ಯವಸ್ಥಿತವಾಗಿ ಮಂಥನ ಕಾರ್ಯಕ್ರಮ ಆಯೋಜಿಸುವ ಕಾರಣಕ್ಕೆ ಮೇ 9ರಂದು ಬೆಂಗಳೂರಿನಲ್ಲಿ ಕೌನ್ಸೆಲಿಂಗ್ ಕುರಿತ ಪೂರ್ವಭಾವಿ ಕಾರ್ಯಾಗಾರ ಆಯೋಜಿಸಿದ್ದು, ಪ್ರತೀ ಕಾಲೇಜಿನಿಂದ ಅತ್ಯಂತ ಕ್ರಿಯಾಶೀಲ ಮೂವರು ಉಪನ್ಯಾಸಕರನ್ನು ನಿಯೋಜಿಸುವಂತೆ ಪತ್ರದಲ್ಲಿ ಕೋರಿದ್ದು, ಸರ್ಕಾರಿ ಅಥವಾ ಅತಿಥಿ ಉಪನ್ಯಾಸಕರನ್ನೂ ಕಾರ್ಯಾಗಾರಕ್ಕೆ ಕಳುಹಿಸಬಹುದು ಎಂದು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

