
ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿ ಶೈಕ್ಷಣಿಕ ಚೌಕಟ್ಟನ್ನು ಬಲಪಡಿಸಲು ಸಿಬಿಎಸ್ಇ ಈ ಕ್ರಮ ಕೈಗೊಂಡಿದೆ.
ಸಿಬಿಎಸ್ಇ 3 ಭಾಷಾ ನೀತಿ: 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ತೇರ್ಗಡೆ ಕಡ್ಡಾಯ
ತ್ರಿಭಾಷಾ ಸೂತ್ರದ ಅಡಿಯಲ್ಲಿ ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಭಾಷೆಗಳಾಗಿರಬೇಕು ಎಂಬ ನಿಯಮವನ್ನು ಅಳವಡಿಸಲಾಗಿದೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮವೊಂದನ್ನು ಜಾರಿಗೆ ತಂದಿದ್ದು, ಹೊಸ ತ್ರಿಭಾಷಾ ನೀತಿಯಡಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಮೂರನೇ ಭಾಷೆಯ ಮೌಲ್ಯಮಾಪನದಲ್ಲಿ ಕಡ್ಡಾಯ ತೇರ್ಗಡೆಯಾಗಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿ ಶೈಕ್ಷಣಿಕ ಚೌಕಟ್ಟನ್ನು ಬಲಪಡಿಸಲು ಸಿಬಿಎಸ್ಇ ಈ ಕ್ರಮ ಕೈಗೊಂಡಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಭಾಷಾ ಕೌಶಲ್ಯ ಮತ್ತು ಸಾಂಸ್ಕೃತಿಕ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಈ ಮೂರನೇ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಮೂರನೇ ಭಾಷೆಯ ಉತ್ತೀರ್ಣತೆ ಕಡ್ಡಾಯ
ಇಲ್ಲಿಯವರೆಗೆ 9 ಮತ್ತು 10ನೇ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಎರಡು ಭಾಷೆಗಳ ಕಲಿಕೆ ಕಡ್ಡಾಯವಾಗಿತ್ತು ಮತ್ತು ಮೂರನೇ ಭಾಷೆಯನ್ನು ಹೆಚ್ಚುವರಿ ಅಥವಾ ಐಚ್ಛಿಕ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ನೀತಿಯನ್ವಯ, ವಿದ್ಯಾರ್ಥಿಗಳು ಆಯ್ದುಕೊಳ್ಳುವ ಮೂರನೇ ಭಾಷೆಯು ಕೇವಲ ಔಪಚಾರಿಕ ವಿಷಯವಾಗಿ ಉಳಿಯುವುದಿಲ್ಲ. ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯಲು ಅಥವಾ ಹತ್ತನೇ ತರಗತಿ ಮಂಡಳಿ ಪರೀಕ್ಷೆಯಲ್ಲಿ ಒಟ್ಟಾರೆ ಉತ್ತೀರ್ಣರಾಗಲು ಈ ಮೂರನೇ ಭಾಷೆಯ ಮೌಲ್ಯಮಾಪನ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಗಳಿಸಿ ತೇರ್ಗಡೆಯಾಗುವುದು ಇನ್ಮುಂದೆ ಕಡ್ಡಾಯವಾಗಿರುತ್ತದೆ.
ಈ ನೀತಿಯು ವಿದ್ಯಾರ್ಥಿಗಳಲ್ಲಿ ಬಹುಭಾಷಾ ಪ್ರಾವೀಣ್ಯತೆಯನ್ನು ಬೆಳೆಸಲು ನೆರವಾಗಲಿದೆ. ದೇಶೀಯ ಭಾಷೆಗಳೊಂದಿಗೆ ಅಂತರರಾಷ್ಟ್ರೀಯ ಭಾಷೆಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ ಎಂದು ಮಂಡಳಿ ತಿಳಿಸಿದೆ.
ಭಾರತೀಯ ಭಾಷೆಗಳಿಗೆ ಆದ್ಯತೆ
ತ್ರಿಭಾಷಾ ಸೂತ್ರದ ಅಡಿಯಲ್ಲಿ ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಭಾಷೆಗಳಾಗಿರಬೇಕು ಎಂಬ ನಿಯಮವನ್ನು ಅಳವಡಿಸಲಾಗಿದೆ. ಇದು ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಪೂರಕವಾದ ನಿರ್ಧಾರವಾಗಿದೆ. ಭಾಷಾ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ, ಆಂತರಿಕ ಅಂಕಗಳ ಹಂಚಿಕೆ ಮತ್ತು ಪರೀಕ್ಷಾ ಪದ್ಧತಿಯ ಕುರಿತು ಸಿಬಿಎಸ್ಇ ಈಗಾಗಲೇ ತನ್ನ ಸಂಯೋಜಿತ ಶಾಲೆಗಳಿಗೆ ವಿಸ್ತೃತ ಮಾರ್ಗಸೂಚಿಗಳನ್ನು ರವಾನಿಸಿದೆ.
ಮಂಡಳಿಯ ಈ ನೂತನ ನಿರ್ಧಾರದಿಂದಾಗಿ ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ಭಾಷಾ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ವಿದ್ಯಾರ್ಥಿಗಳು ಕೂಡ ಭಾಷಾ ವಿಷಯಗಳ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

