
ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ: ಸಬ್-ಇನ್ಸ್ಪೆಕ್ಟರ್ ಸೇರಿ ಆರು ಮಂದಿ ಅಮಾನತು
ಪತ್ತೆಯಾದ ಸ್ಫೋಟಕಗಳು ಯಾವುದೇ ಭೀತಿಯನ್ನು ಒಡ್ಡುವ ಹಂತದಲ್ಲಿರಲಿಲ್ಲ ಎಂದು ವರದಿ ತಿಳಿಸಿದೆ. ಜಿಲೆಟಿನ್ ಕಡ್ಡಿಗಳು ಸುಮಾರು ಮೂರು ವರ್ಷಗಳಷ್ಟು ಹಳೆಯದಾಗಿದ್ದವು ಎಂದು ಎಫ್ಎಸ್ಎಲ್ ವರದಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿಯ ವೇಳೆ ಭದ್ರತೆಯಲ್ಲಿ ಗಂಭೀರ ಲೋಪ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಬ್-ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು ಆರು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇ 10 ರಂದು ಪ್ರಧಾನಿಯವರು ಕನಕಪುರ ರಸ್ತೆಯಲ್ಲಿರುವ 'ಆರ್ಟ್ ಆಫ್ ಲಿವಿಂಗ್' ಫೌಂಡೇಶನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಭದ್ರತಾ ಲೋಪ ನಡೆದಿದೆ. ಪ್ರಧಾನಿಯವರ ಸಂಚಾರ ಮಾರ್ಗದ ಸಮೀಪದಲ್ಲಿಯೇ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯವರ ಭೇಟಿ ವೇಳೆ ಅವರ ಸಂಚಾರ ಮಾರ್ಗದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಕುಪ್ಪರೆಡ್ಡಿ ಕೆರೆಯ ಬಳಿ ಒಂದು ಅನುಮಾನಾಸ್ಪದ ಜಿಲೆಟಿನ್ ಕಡ್ಡಿ ಪೆಟ್ಟಿಗೆ ಪತ್ತೆಯಾಗಿತ್ತು. ಪೋಲಿಸ್ ಕಾನ್ಸ್ಟೇಬಲ್ ಒಬ್ಬರು ಈ ಪೆಟ್ಟಿಗೆಯನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ಮಾರ್ಗದಲ್ಲಿ ಪ್ರಧಾನಿಯವರ ಬೆಂಗಾವಲು ಪಡೆ ಹಾದುಹೋಗಲು ಸಿದ್ಧತೆ ನಡೆದಿತ್ತು. ಭದ್ರತಾ ದೃಷ್ಟಿಯಿಂದ ಇದು ಅತ್ಯಂತ ಸೂಕ್ಷ್ಮ ವಿಷಯವಾಗಿತ್ತು.
ಪತ್ತೆಯಾದ ವಸ್ತುಗಳೇನು?
ಪೊಲೀಸ್ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಪೆಟ್ಟಿಗೆಯಲ್ಲಿ ಕೇವಲ ಎರಡು ಜಿಲೆಟಿನ್ ಕಡ್ಡಿಗಳು ಮತ್ತು ಬೆಂಕಿಪೆಟ್ಟಿಗೆ ಇತ್ತು ಎನ್ನಲಾಗಿತ್ತು. ಆದರೆ, ನಂತರದ ತನಿಖೆ ಮತ್ತು ರಾಷ್ಟ್ರೀಯ ತನಿಖಾ ದಳ ಈ ಪ್ರಕರಣದಲ್ಲಿ ಆಸಕ್ತಿ ವಹಿಸಿದ ನಂತರ ಅಚ್ಚರಿಯ ಅಂಶಗಳು ಬೆಳಕಿಗೆ ಬಂದವು. ಪೆಟ್ಟಿಗೆಯಲ್ಲಿ ಎರಡು ಜಿಲೆಟಿನ್ ಕಡ್ಡಿಗಳ ಜತೆಗೆ ಬೆಂಕಿಪೆಟ್ಟಿಗೆ, ಕರ್ಪೂರ, ಬ್ಯಾಟರಿಗಳು, ವೈರ್ಗಳು, ರಿಯಲ್-ಟೈಮ್ ಕ್ಲಾಕ್ ಮತ್ತು ಎಲ್ಸಿಡಿ ಡಿಸ್ಪ್ಲೇ ಇರುವುದು ಕಂಡುಬಂದಿದೆ. ರಸ್ತೆಯಿಂದ ಕೇವಲ 25 ಅಡಿ ದೂರದಲ್ಲಿರುವ ಖಾಸಗಿ ಆಸ್ತಿಯೊಂದರ ಕಾಂಪೌಂಡ್ ಗೋಡೆಯ ಬಳಿ ಈ ಪೆಟ್ಟಿಗೆಯನ್ನು ಬಚ್ಚಿಡಲಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಮಾನತು ಕ್ರಮ - ಚುರುಕುಗೊಂಡ ತನಿಖೆ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಆದರೂ ಅಮಾನತುಗೊಂಡ ಅಧಿಕಾರಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ. ಪ್ರಧಾನಿಯವರಂತಹ ಉನ್ನತ ಮಟ್ಟದ ಗಣ್ಯರ ಭದ್ರತೆಯ ವಿಷಯದಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದು ಹೇಗೆ ಎಂಬುದು ಈಗ ತೀವ್ರ ತನಿಖೆಗೆ ಒಳಪಟ್ಟಿದೆ.
ತನಿಖೆಯ ಜಾಲ ವಿಸ್ತರಣೆ
ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ತಂಡಗಳು ತನಿಖೆಯನ್ನು ತೀವ್ರಗೊಳಿಸಿವೆ. ಸ್ಫೋಟಕಗಳನ್ನು ಯಾರು ತಂದರು, ಇದರ ಹಿಂದೆ ಯಾವುದಾದರೂ ಉಗ್ರ ಸಂಘಟನೆಗಳ ಕೈವಾಡವಿದೆಯೇ ಎಂಬ ಕೋನದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಆರಂಭಿಕ ತನಿಖಾ ತಂಡಗಳು ಕರ್ನಾಟಕದ ನೆರೆಯ ಜಿಲ್ಲೆಗಳಲ್ಲದೆ, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೂ ತೆರಳಿ ಮಾಹಿತಿ ಕಲೆ ಹಾಕಿವೆ. ಇದರ ಜೊತೆಗೆ, ಕೇಂದ್ರ ಗುಪ್ತಚರ ದಳ ಮತ್ತು ಎನ್ಐಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಫ್ಎಸ್ಎಲ್ ವರದಿ
ಪ್ರಕರಣದಲ್ಲಿ ಪೊಲೀಸರು ಮತ್ತು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದರೂ, ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯು ನಿರಾಳತೆಯನ್ನು ತಂದಿದೆ. ಪತ್ತೆಯಾದ ಸ್ಫೋಟಕಗಳು ಯಾವುದೇ ಭೀತಿಯನ್ನು ಒಡ್ಡುವ ಹಂತದಲ್ಲಿರಲಿಲ್ಲ ಎಂದು ವರದಿ ತಿಳಿಸಿದೆ. ಜಿಲೆಟಿನ್ ಕಡ್ಡಿಗಳು ಸುಮಾರು ಮೂರು ವರ್ಷಗಳಷ್ಟು ಹಳೆಯದಾಗಿದ್ದವು. ಪೆಟ್ಟಿಗೆಯಲ್ಲಿದ್ದ ಟೈಮರ್ ಕಾರ್ಯನಿರ್ವಹಿಸುತ್ತಿರಲಿಲ್ಲ, ಸ್ಫೋಟಕ್ಕೆ ಅಗತ್ಯವಾದ 'ಡಿಟೋನೇಟರ್' ಪೆಟ್ಟಿಗೆಯಲ್ಲಿ ಇರಲಿಲ್ಲ ಎಂದು ಹೇಳಿದೆ. ಈ ಸ್ಫೋಟಕಗಳು ಪೂರ್ಣ ಪ್ರಮಾಣದ ಸ್ಫೋಟವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಆದರೆ, ಇಷ್ಟೊಂದು ಸಾಮಗ್ರಿಗಳನ್ನು ಪ್ರಧಾನಿಯವರ ಮಾರ್ಗದಲ್ಲಿ ಇರಿಸಿದ್ದು ಕೇವಲ ಭಯ ಹುಟ್ಟಿಸುವ ಉದ್ದೇಶವಿತ್ತಾ ಎಂಬುದು ಇನ್ನೂ ನಿಗೂಢವಾಗಿದೆ.

