
ಸಾಂದರ್ಭಿಕ ಚಿತ್ರ
ಬ್ರೇಕಪ್ ಮಾಡಿಕೊಂಡ ಯುವತಿಗೆ ಚಾಕು ಇರಿದ ಪ್ರಿಯಕರನ ಸಹೋದರ
ಪ್ರಿಯಕರನ ವಿವಾಹದ ವಿಚಾರ ತಿಳಿದು ಸಂಬಂಧ ಕಡಿದ ಯುವತಿ ಮೇಲೆ ಚಾಕು ದಾಳಿ; ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೇಮ ಸಂಬಂಧವನ್ನು ಮುರಿದುಕೊಂಡಿದ್ದ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬಳನ್ನು ಪ್ರಿಯಕರನ ಸಹೋದರ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಿಹಳ್ಳಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಮೃತಳನ್ನು ಅಮೃತಾ (22) ಎಂದು ಗುರುತಿಸಲಾಗಿದೆ. ಅವರು ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಜೊತೆಗೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಧನುಷ್ ಎಂಬಾತನೊಂದಿಗೆ ಸುಮಾರು ನಾಲ್ಕು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕುಟುಂಬದ ಪರಿಚಯದ ಮೂಲಕ ಇಬ್ಬರಿಗೂ ಸ್ನೇಹ ಬೆಳೆದು ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು.
ಆದರೆ, ಧನುಷ್ಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನ ಪಡೆದಿರುವುದರ ಜೊತೆಗೆ ಮಗುವೊಂದಿದೆ ಎಂಬ ವಿಚಾರವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರ ತಿಳಿದ ಬಳಿಕ ಅಮೃತಾ ಸಂಬಂಧವನ್ನು ಕೊನೆಗೊಳಿಸಿದ್ದರು. ಬಳಿಕ ಮತ್ತೆ ಮದುವೆಯಾಗುವಂತೆ ಧನುಷ್ ಒತ್ತಾಯಿಸಿದ್ದರೂ ಅವರು ನಿರಾಕರಿಸಿದ್ದರು ಎನ್ನಲಾಗಿದೆ.
ಜುಲೈ 13ರಂದು ಅಮೃತಾ ತಮ್ಮ ನಿವಾಸದ ಸಮೀಪ ತೆರಳುತ್ತಿದ್ದ ವೇಳೆ ಧನುಷ್ನ ಸಹೋದರ ಸೂರ್ಯ ಅವರ ದಾರಿ ತಡೆದು ವಾಗ್ವಾದ ನಡೆಸಿದ್ದಾನೆ. ಬಳಿಕ ಎದೆ ಹಾಗೂ ಬೆನ್ನಿನ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಮೃತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಅವರು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೀವನ್ ಭೀಮಾನಗರ ಪೊಲೀಸರು ಧನುಷ್ ಹಾಗೂ ಸೂರ್ಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಘಟನೆಯ ಹಿಂದಿನ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ಮುಂದುವರಿದಿದೆ.

