
ಬಾಲಕನ ಸಾವಿನ ಹಿನ್ನೆಲೆಯಲ್ಲಿ ತಂದೆ ಸೋಮರಾವ್ ಹೂಗಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾಲ್ಕು ವರ್ಷದ ಮಗನನ್ನು ಡ್ಯಾಮ್ಗೆ ಎಸೆದು ಕೊಂದಿರುವ ಶಂಕೆ- ತಂದೆ ವಶಕ್ಕೆ
ಕಲಬುರಗಿ ಚಿಂಚೋಳಿಯಲ್ಲಿ ನಾಲ್ಕು ವರ್ಷದ ಮಗನನ್ನು ತಂದೆಯೇ ನಾಗರಾಳ ಜಲಾಶಯಕ್ಕೆ ಎಸೆದ ಆರೋಪ ಕೇಳಿಬಂದಿದೆ. ಬಾಲಕನ ಶವ ಪತ್ತೆಯಾಗಿದ್ದು, ಆರೋಪಿ ತಂದೆಯನ್ನು ವಿಚಾರಣೆಗೊಳಪಡಿಸಲಾಗಿದೆ.
ನಾಲ್ಕು ವರ್ಷದ ಮಗನನ್ನು ಹೆತ್ತ ತಂದೆಯೇ ಜಲಾಶಯಕ್ಕೆ ಎಸೆದು ಕೊಂದಿರುವ ಶಂಕೆ ಕಲಬುರಗಿ ಜಿಲ್ಲೆಯಲ್ಲಿನಡೆದಿದೆ ಎನ್ನಲಾಗಿದೆ. ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕನ ಶವ ಜಲಾಶಯದಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಬಾಲಕನನ್ನು ಗುಂಡೇಶ್ ಎಂದು ಗುರುತಿಸಲಾಗಿದೆ. ಆರೋಪಿ ತಂದೆ ಸೋಮರಾವ್ ಹೂಗಾರ್ ಮಗನೊಂದಿಗೆ ಕೆಲಕಾಲ ಆಟವಾಡಿಸುತ್ತಿದ್ದ ಎನ್ನಲಾಗಿದೆ. ಬಳಿಕ ಯಾರಿಗೂ ಮಾಹಿತಿ ನೀಡದೆ ಬಾಲಕನನ್ನು ಕರೆದುಕೊಂಡು ತೆರಳಿದ್ದ ಎಂದು ಮಗುವಿನ ತಾಯಿ ಕಲ್ಪನಾ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಮಗುವಿನ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದು, ಘಟನೆ ಕುರಿತು ಚಿಂಚೋಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ನಾಗರಾಳ ಜಲಾಶಯದಲ್ಲಿ ಶೋಧ
ಮಗು ಜಲಾಶಯಕ್ಕೆ ಬಿದ್ದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಲ್ಲಿ ಶೋಧ ನಡೆಸಿದ ವೇಳೆ ಬಾಲಕನ ಶವ ಪತ್ತೆಯಾಗಿದೆ.
ತಂದೆ ಪೊಲೀಸರ ವಶಕ್ಕೆ
ಘಟನೆಗೆ ಸಂಬಂಧಿಸಿದಂತೆ ಸೋಮರಾವ್ ಹೂಗಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕನ ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ತನಿಖೆ ಮುಂದುವರಿದಿದೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕ ಘಟನೆಯ ಸಂಪೂರ್ಣ ವಿವರ ಹೊರಬರಲಿದೆ.

