
ಶುಕ್ರವಾರ ರಜೆ ಇದ್ದ ಕಾರಣ, ಅರ್ಪಿತಾ ಮತ್ತು ಸುನಿತಾ ತಮ್ಮ ಇತರ ಮೂವರು ಸ್ನೇಹಿತರೊಂದಿಗೆ ಸೇರಿ ಡ್ಯಾಂ ಬಳಿಯ ನದಿಗೆ ವಿಹಾರ ಹಾಗೂ ಸ್ನಾನಕ್ಕಾಗಿ ತೆರಳಿದ್ದರು.
ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು
ಶುಕ್ರವಾರ ರಜೆ ಇದ್ದ ಕಾರಣ, ಅರ್ಪಿತಾ ಮತ್ತು ಸುನಿತಾ ತಮ್ಮ ಇತರ ಮೂವರು ಸ್ನೇಹಿತರೊಂದಿಗೆ ಸೇರಿ ಡ್ಯಾಂ ಬಳಿಯ ನದಿಗೆ ವಿಹಾರ ಹಾಗೂ ಸ್ನಾನಕ್ಕಾಗಿ ತೆರಳಿದ್ದರು.
ರಜೆಯ ದಿನದಂದು ಸ್ನೇಹಿತರೊಂದಿಗೆ ನದಿಗೆ ಸ್ನಾನ ಮಾಡಲು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಶುಕ್ರವಾರ (ಮೇ 8) ಸಂಜೆ ನಡೆದಿದೆ.
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೊಳ್ಯದಕಟ್ಟ ಡ್ಯಾಂ ಬಳಿ ಈ ದುರಂತ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತಾ (15) ಮತ್ತು ಸುನಿತಾ (21) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಶುಕ್ರವಾರ ರಜೆ ಇದ್ದ ಕಾರಣ, ಅರ್ಪಿತಾ ಮತ್ತು ಸುನಿತಾ ತಮ್ಮ ಇತರ ಮೂವರು ಸ್ನೇಹಿತರೊಂದಿಗೆ ಸೇರಿ ಡ್ಯಾಂ ಬಳಿಯ ನದಿಗೆ ವಿಹಾರ ಹಾಗೂ ಸ್ನಾನಕ್ಕಾಗಿ ತೆರಳಿದ್ದರು. ಸ್ನಾನ ಮಾಡುತ್ತಿದ್ದ ವೇಳೆ ನದಿಯ ಆಳ ಮತ್ತು ನೀರಿನ ಸೆಳೆತದ ಅರಿವಿಲ್ಲದ ಇಬ್ಬರೂ ಆಯತಪ್ಪಿ ಆಳವಾದ ಪ್ರದೇಶಕ್ಕೆ ಹೋಗಿದ್ದಾರೆ. ಈ ವೇಳೆ ಈಜಲು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ.
ಇದನ್ನು ಕಂಡು ಗಾಬರಿಗೊಂಡ ಜೊತೆಯಲ್ಲಿದ್ದ ಸ್ನೇಹಿತರು, ಅವರನ್ನು ರಕ್ಷಿಸಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ತಕ್ಷಣವೇ ಅವರು ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಕಡಬ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿ ಇಬ್ಬರೂ ವಿದ್ಯಾರ್ಥಿನಿಯರ ಮೃತದೇಹಗಳನ್ನು ಸುಳಿಯಿಂದ ಮೇಲಕ್ಕೆ ಎತ್ತಿದ್ದಾರೆ.
ಒಂದೇ ಊರಿನ ಇಬ್ಬರು ಹೆಣ್ಣುಮಕ್ಕಳು ಜಲಸಮಾಧಿಯಾಗಿರುವುದರಿಂದ ವಿಮಲಗಿರಿ ಗ್ರಾಮದಲ್ಲಿ ಶೋಕಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

