Student dragged to toilet in engineering college and raped, accused arrested
x

ಗದಗದಲ್ಲಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಆರೋಪದಡಿ ವೈದ್ಯ, ನರ್ಸ್ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ.

ಗದಗದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಆರೋಪ; ವೈದ್ಯ, ನರ್ಸ್ ಸೇರಿ 7 ಮಂದಿ ಬಂಧನ

ಸಂತ್ರಸ್ತೆಗೆ ಚಾಕೊಲೇಟ್‌ಗಳ ಆಮಿಷವೊಡ್ಡಿ ಕರೆದುಕೊಂಡು ಹೋಗಿ ಆರೋಪಿಗಳು ಹಲವು ಬಾರಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.


Click the Play button to hear this message in audio format

ಗದಗ ಜಿಲ್ಲೆಯಲ್ಲಿ 26 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಹಲವು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯ ಹಾಗೂ ನರ್ಸ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಮಹಿಳೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದ ಬಳಿಕ ಪ್ರಕರಣ ಹೊರಬಂದಿದೆ.

ಬಂಧಿತರನ್ನು ಸಿಕಂದರ್ ಗುಲಾಬ್‌ಸಾಬ್ ಬೇಪಾರಿ, ಪ್ರದೀಪ್ ಸಾಗರ್ ನವಲೇಕರ್, ಶಬ್ಬೀರ್ ಅಹ್ಮದ್ ಅಲಿಯಾಸ್ ಜೂನ್‌ಸಾಬ್ ಮೊಹಮ್ಮದ್‌ ರಫೀಕ್ ಲಗೋಟಿ, ಭರತ್‌ ಮಹದೇವಪ್ಪ ಕೊರವರ, ಸಂದೀಪ್ ಸಾಗರ್ ನವಲೇಕರ್, ಡಾ. ನಾಗರಾಜ್ ಕಾಮತಾರ್ ಹಾಗೂ ರೇಖಾ ಶಿರಹಟ್ಟಿ ಎಂದು ಗುರುತಿಸಲಾಗಿದೆ.

ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ

ಪೊಲೀಸರ ಪ್ರಕಾರ, ಸಂತ್ರಸ್ತೆ ಹಲವು ತಿಂಗಳಿನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದೆ. ಆದರೆ ಇತ್ತೀಚೆಗೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಾಗ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬಳಿಕ ಪ್ರಕರಣದ ಮಾಹಿತಿ ಪೊಲೀಸರಿಗೆ ತಲುಪಿದೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಾಕೊಲೇಟ್ ನೀಡಿ ಕರೆದೊಯ್ದು ಅತ್ಯಾಚಾರ ಆರೋಪ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿಕಂದರ್ ಬೇಪಾರಿ, ಪ್ರದೀಪ್ ನವಲೇಕರ್, ಶಬ್ಬೀರ್ ಅಹ್ಮದ್ ಹಾಗೂ ಭಾರತ ಕೊರವರ ಸಂತ್ರಸ್ತೆಯನ್ನು ಚಾಕೊಲೇಟ್‌ಗಳ ಆಮಿಷವೊಡ್ಡಿ ಕರೆದುಕೊಂಡು ಹೋಗಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿಗಳು ಹಾಗೂ ಸ್ಥಳೀಯ ಕೆಲವರು ಸಂತ್ರಸ್ತೆಯ ಕುಟುಂಬಕ್ಕೆ ಹಣ ನೀಡಲು ಮುಂದಾಗಿದ್ದರು ಮತ್ತು ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಅಕ್ರಮ ಗರ್ಭಪಾತಕ್ಕೆ ಯತ್ನಿಸಿದ ಆರೋಪ

ಸಂತ್ರಸ್ತೆ ಗರ್ಭಿಣಿಯಾಗಿರುವುದು ತಿಳಿದ ಬಳಿಕ ಗರ್ಭಪಾತ ಮಾಡಿಸಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ವೈದ್ಯ ಡಾ. ನಾಗರಾಜ್ ಕಾಮತಾರ್ ಹಾಗೂ ನರ್ಸ್ ರೇಖಾ ಶಿರಹಟ್ಟಿ ಅವರು ಅಕ್ರಮವಾಗಿ ಗರ್ಭಪಾತದ ಮಾತ್ರೆಗಳನ್ನು ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಗದಗ ಅಂಜುಮನ್ ಅಧ್ಯಕ್ಷ ಅನ್ವರ್ ಬಾಗೇವಾಡಿ, ಕಾರ್ಯದರ್ಶಿ ಅಲ್ತಾಫ್ ಕೊಪ್ಪಳ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಬಿಲಾಲ್ ಗೋಕಾವಿ ಅವರ ವಿರುದ್ಧವೂ ಗರ್ಭಪಾತಕ್ಕೆ ಸಹಾಯ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಮೆಡಿಕಲ್ ಶಾಪ್ ಮಾಲೀಕನಿಗಾಗಿ ಶೋಧ

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಗರ್ಭಪಾತದ ಮಾತ್ರೆಗಳನ್ನು ಪೂರೈಸಿದ ಆರೋಪದ ಮೆಡಿಕಲ್ ಶಾಪ್ ಮಾಲೀಕ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ವಿಚಾರಣೆ ಮುಂದುವರಿದಿದ್ದು, ಸಂತ್ರಸ್ತೆಯ ಮೇಲಿನ ದೌರ್ಜನ್ಯ, ಗರ್ಭಪಾತಕ್ಕೆ ನಡೆದ ಪ್ರಯತ್ನ ಹಾಗೂ ಕುಟುಂಬಕ್ಕೆ ಬೆದರಿಕೆ ಹಾಕಿದ ಆರೋಪಗಳ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Read More
Next Story