
ಸಿಬಿಐ ಅಧಿಕಾರಿಗಳು
ಆಪರೇಷನ್ ಸೈಸ್ಟ್ರೈಕ್ : ಸಿಬಿಐನಿಂದ ಅಂತಾರಾಷ್ಟ್ರೀಯ ಸೈಬರ್ ಕ್ರೈಂ ಜಾಲ ಪತ್ತೆ; 60 ಲಕ್ಷ ರೂ. ನಗದು ವಶ
ಸಿಬಿಐ ಅಧಿಕಾರಿಗಳು ನವದೆಹಲಿ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಸೈಬರ್ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಲು ಭಾರತೀಯ ತನಿಖಾ ಸಂಸ್ಥೆ 'ಸಿಬಿಐ' ಮಹತ್ವದ ಹೆಜ್ಜೆಯನ್ನಿಟ್ಟಿದೆ. 'ಆಪರೇಷನ್ ಸೈಸ್ಟ್ರೈಕ್' (Operation CyStrike) ಹೆಸರಿನಲ್ಲಿ ನಡೆದ ಬೃಹತ್ ಬಹುರಾಷ್ಟ್ರೀಯ ಕಾರ್ಯಾಚರಣೆಯಲ್ಲಿ, ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳ ನಾಗರಿಕರನ್ನು ವಂಚಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಜನವರಿ 30ರಂದು ಸಿಬಿಐ, ಅಮೆರಿಕದ ಎಫ್ಬಿಐ (FBI), ಯುನೈಟೆಡ್ ಕಿಂಗ್ಡಮ್, ಕುವೈತ್, ಐರ್ಲೆಂಡ್ ಮತ್ತು ಸಿಂಗಾಪುರದ ತನಿಖಾ ಸಂಸ್ಥೆಗಳ ಜೊತೆಗೂಡಿ ಈ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಭಾರತದಿಂದಲೇ ಕಾರ್ಯನಿರ್ವಹಿಸುತ್ತಿದ್ದ ಈ ಸೈಬರ್ ಕ್ರೈಂ ಜಾಲಗಳು, ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆರ್ಥಿಕ ವಂಚನೆ ಎಸಗುತ್ತಿದ್ದವು.
ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ದಾಳಿ
ಸಿಬಿಐ ಅಧಿಕಾರಿಗಳು ನವದೆಹಲಿ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ಗುರುತುಗಳನ್ನು ಸೃಷ್ಟಿಸಿ ವಂಚನೆ ಎಸಗುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿದೆ.
ನಕಲಿ ಕುವೈತ್ ವೀಸಾ ದಂಧೆ ಬಯಲು
ನವದೆಹಲಿ, ಗಾಜಿಯಾಬಾದ್ ಮತ್ತು ಕರ್ನಾಟಕದಿಂದ ಕಾರ್ಯನಿರ್ವಹಿಸುತ್ತಿದ್ದ ಮತ್ತೊಂದು ಪ್ರಮುಖ ಜಾಲವನ್ನು ಸಿಬಿಐ ಭೇದಿಸಿದೆ. ಈ ಆರೋಪಿಗಳು https://eservicemoi-Kw.com ಎಂಬ ನಕಲಿ ವೆಬ್ಸೈಟ್ ಸೃಷ್ಟಿಸಿದ್ದರು. ಕುವೈತ್ನ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮತ್ತು ನಕಲಿ ಇ-ವೀಸಾ (e-Visa) ನೀಡುವ ಮೂಲಕ ಅಮಾಯಕರಿಂದ ಹಣ ಸುಲಿಗೆ ಮಾಡುತ್ತಿದ್ದರು. ದಾಳಿಯ ವೇಳೆ ನಕಲಿ ವೀಸಾ ದಾಖಲೆಗಳು ಮತ್ತು ಉದ್ಯೋಗ ನೇಮಕಾತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
60 ಲಕ್ಷ ರೂ. ವಶ
ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅಪರಾಧಕ್ಕೆ ಬಳಸಲಾದ ಲ್ಯಾಪ್ಟಾಪ್ಗಳು, ಮೊಬೈಲ್ ಫೋನ್ಗಳು ಮತ್ತು ಹಾರ್ಡ್ ಡಿಸ್ಕ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲೊಬ್ಬನಿಂದ ಬರೋಬ್ಬರಿ 60 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಸ್ಥಳದಲ್ಲೇ ಜಾಲದ ಪ್ರಮುಖ ಆರೋಪಿಯೊಬ್ಬನನ್ನು ಸಿಬಿಐ ಬಂಧಿಸಿದೆ.
ವಿದೇಶಿ ಬಲಿಪಶುಗಳಿಂದ ಸುಲಿಗೆ ಮಾಡಿದ ಹಣವನ್ನು ವರ್ಗಾಯಿಸಲು ಬಳಸುತ್ತಿದ್ದ 'ಮ್ಯೂಲ್ ಖಾತೆಗಳನ್ನು' ಗುರುತಿಸಿ ಸ್ಥಗಿತಗೊಳಿಸಲಾಗಿದೆ. ಇಂಟರ್ಪೋಲ್ ಮತ್ತು ವಿದೇಶಿ ಕಾನೂನು ಜಾರಿ ಏಜೆನ್ಸಿಗಳ ಸಹಯೋಗದೊಂದಿಗೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

