ತಾಯಿಗೆ ಹಿಂಸೆ ಕೊಡುತ್ತಿದ್ದ ಮಲತಂದೆಯನ್ನು ಹೊಡೆದು ಕೊಂದ ಮಗ
x

ಮದ್ಯದ ಅಮಲಿನಲ್ಲಿ ತಾಯಿಗೆ ಕಿರುಕುಳ: ಮಲತಂದೆಯನ್ನು ಕೊಂದ ಪುತ್ರ

ತಾಯಿಗೆ ಹಿಂಸೆ ಕೊಡುತ್ತಿದ್ದ ಮಲತಂದೆಯನ್ನು ಹೊಡೆದು ಕೊಂದ ಮಗ

ಬೆಂಗಳೂರಿನ ಶಿವಪುರದಲ್ಲಿ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ ಮಲತಂದೆಯನ್ನು 23 ವರ್ಷದ ಯುವಕ ಶಾಕ್ ಅಬ್ಸಾರ್ಬರ್‌ನಿಂದ ಹೊಡೆದು ಕೊಂದಿದ್ದಾನೆ. ಪ್ರಕರಣದಲ್ಲಿ ಯುವಕನನ್ನು ಅರೆಸ್ಟ್‌ ಮಾಡಲಾಗಿದೆ.


Click the Play button to hear this message in audio format

ಬೆಂಗಳೂರಿನಲ್ಲಿ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ 23 ವರ್ಷದ ಯುವಕನೊಬ್ಬ ತನ್ನ ಮಲತಂದೆಯನ್ನು ಶಾಕ್ ಅಬ್ಸಾರ್ಬರ್ ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ನಡೆದಿದೆ. ಶಿವಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಉದಯ್ ಕುಮಾರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಶ್ರೀಧರ್, ಉದಯ್ ಕುಮಾರ್‌ನ ತಾಯಿ ದೀನ ಅವರನ್ನು ಸುಮಾರು 22 ವರ್ಷಗಳ ಹಿಂದೆ ಮದುವೆಯಾಗಿದ್ದ. ಅದಕ್ಕೂ ಮುನ್ನ ದೀನ ಮೊದಲ ಪತಿಯಿಂದ ಪ್ರತ್ಯೇಕವಾಗಿದ್ದರು. ಮೊದಲ ಮದುವೆಯಿಂದ ದೀನಗೆ ಉದಯ್ ಕುಮಾರ್ ಎಂಬ ಪುತ್ರನಿದ್ದ. ಬಳಿಕ ಶ್ರೀಧರ್ ಹಾಗೂ ದೀನ ದಂಪತಿಗೆ ದರ್ಶನ್ ಮತ್ತು ಕಾಂಚನಾ ಎಂಬ ಇಬ್ಬರು ಮಕ್ಕಳಿದ್ದರು. ನಾಲ್ವರು ಮಕ್ಕಳೂ ಕುಟುಂಬದೊಂದಿಗೆ ವಾಸಿಸುತ್ತಿದ್ದರು.

ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ

ಶ್ರೀಧರ್ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಮದ್ಯ ಸೇವಿಸುವ ಅಭ್ಯಾಸ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮದ್ಯದ ಅಮಲಿನಲ್ಲಿ ಆಗಾಗ್ಗೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಹಾಗೂ ಈ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.

ಕೈಯಲ್ಲಿ ಕತ್ತರಿ ಹಿಡಿದಿದ್ದ ಶ್ರೀಧರ್

ಮಂಗಳವಾರ ರಾತ್ರಿ ಮನೆಯಲ್ಲಿದ್ದಾಗ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿದ್ದ ಶ್ರೀಧರ್ ಪತ್ನಿ ದೀನ ಜೊತೆಗೆ ಜಗಳವಾಡಿದ್ದು, ಬಳಿಕ ಕತ್ತರಿ ತೆಗೆದುಕೊಂಡು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ತಾಯಿಯನ್ನು ರಕ್ಷಿಸಲು ಮಧ್ಯಪ್ರವೇಶಿಸಿದ ಉದಯ್ ಕುಮಾರ್, ಮನೆಯಲ್ಲಿದ್ದ ಮೋಟಾರ್‌ಸೈಕಲ್‌ನ ಶಾಕ್ ಅಬ್ಸಾರ್ಬರ್ ಬಳಸಿ ಶ್ರೀಧರ್ ಮೇಲೆ ಮೂರು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಚಿಕಿತ್ಸೆ ಫಲಿಸದೆ ಸಾವು

ಹಲ್ಲೆಯಿಂದ ಶ್ರೀಧರ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮದನಾಯಕನಹಳ್ಳಿ ಪೊಲೀಸರು ಉದಯ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆಗೆ ನಿಖರ ಕಾರಣ ಹಾಗೂ ಕುಟುಂಬದಲ್ಲಿ ನಡೆದಿದ್ದ ಹಿಂದಿನ ಗಲಾಟೆಗಳ ಬಗ್ಗೆಯೂ ಪೊಲೀಸರು ಹೆಚ್ಚಿನ ಮಾಹಿತಿ ಕಳೆ ಹಾಕುತ್ತಿದ್ದಾರೆ.

Read More
Next Story