
ಸಾಂದರ್ಭಿಕ ಚಿತ್ರ
ವಿಮಾನಯಾನ ವಲಯಕ್ಕೆ ಕೇಂದ್ರದಿಂದ ಬಂಪರ್ ನೆರವು: ಏರ್ಲೈನ್ಗಳಿಗೆ 5,000 ಕೋಟಿ ರೂ ತುರ್ತು ಪ್ಯಾಕೇಜ್
'ತುರ್ತು ಸಾಲ ಭರವಸೆ ಯೋಜನೆ'ಯ ಅಡಿಯಲ್ಲಿ ಈ ನೆರವು ನೀಡಲಾಗುತ್ತಿದ್ದು, ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಏರ್ಲೈನ್ ಕಂಪನಿಗಳಿಗೆ ತಾತ್ಕಾಲಿಕ ದ್ರವ್ಯತೆ ಒದಗಿಸುವುದು ಈ ಪ್ಯಾಕೇಜ್ನ ಪ್ರಮುಖ ಉದ್ದೇಶ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹಾಗೂ ಗಗನಕ್ಕೇರುತ್ತಿರುವ ಜೆಟ್ ಇಂಧನ ದರದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಿಮಾನಯಾನ ವಲಯಕ್ಕೆ ಕೇಂದ್ರ ಸರ್ಕಾರವು ಬರೋಬ್ಬರಿ 5,000 ಕೋಟಿ ರೂಪಾಯಿಗಳ ಬೃಹತ್ ತುರ್ತು ನೆರವು ಪ್ಯಾಕೇಜ್ ಘೋಷಿಸಿದೆ.
'ತುರ್ತು ಸಾಲ ಭರವಸೆ ಯೋಜನೆ'ಯ ಅಡಿಯಲ್ಲಿ ಈ ನೆರವು ನೀಡಲಾಗುತ್ತಿದ್ದು, ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಏರ್ಲೈನ್ ಕಂಪನಿಗಳಿಗೆ ತಾತ್ಕಾಲಿಕ ದ್ರವ್ಯತೆ ಒದಗಿಸುವುದು ಈ ಪ್ಯಾಕೇಜ್ನ ಪ್ರಮುಖ ಉದ್ದೇಶ.
ಏರ್ಲೈನ್ಗಳಿಗೆ ಎದುರಾದ ಸಂಕಷ್ಟವೇನು?
ಇರಾನ್-ಇಸ್ರೇಲ್ ಯುದ್ಧದ ಕಾರ್ಮೋಡ, ವಿಮಾನಯಾನ ಇಂಧನ ದರದಲ್ಲಿನ ದಿಢೀರ್ ಏರಿಕೆ, ರೂಪಾಯಿ ಮೌಲ್ಯದ ಕುಸಿತ ಹಾಗೂ ಭದ್ರತಾ ದೃಷ್ಟಿಯಿಂದ ಕೆಲವು ವಾಯುಮಾರ್ಗಗಳ ಮೇಲಿನ ನಿರ್ಬಂಧಗಳಿಂದಾಗಿ ವಿಮಾನಯಾನ ಕಂಪನಿಗಳ ಕಾರ್ಯಾಚರಣೆ ವೆಚ್ಚ ಮಿತಿಮೀರಿದೆ. ಇದರ ನೇರ ಪರಿಣಾಮವಾಗಿ ಹಲವು ಅಂತರರಾಷ್ಟ್ರೀಯ ಮಾರ್ಗಗಳು ವಾಣಿಜ್ಯಿಕವಾಗಿ ನಷ್ಟದ ಹಾದಿ ಹಿಡಿದಿವೆ. ಈ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು 'ಏರ್ ಇಂಡಿಯಾ' ಈಗಾಗಲೇ ಜೂನ್ ಮತ್ತು ಜುಲೈ ತಿಂಗಳ ತನ್ನ ಹಲವು ಅಂತಾರಾಷ್ಟ್ರೀಯ ಸೇವೆಗಳನ್ನು ಕಡಿತಗೊಳಿಸಲು ಮುಂದಾಗಿದೆ.
ಪ್ಯಾಕೇಜ್ನ ಪ್ರಮುಖ ಮುಖ್ಯಾಂಶಗಳು
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, ಅರ್ಹ ಏರ್ಲೈನ್ ಸಂಸ್ಥೆಗಳಿಗೆ ಈ ಯೋಜನೆಯಡಿ ತಲಾ ಗರಿಷ್ಠ 1,000 ಕೋಟಿ ರೂಪಾಯಿಗಳವರೆಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಹೆಚ್ಚುವರಿ 500 ಕೋಟಿ ರೂಪಾಯಿ ನೆರವು: ಸಮಾನ ಪ್ರಮಾಣದ ಈಕ್ವಿಟಿ ಹೂಡಿಕೆಗೆ ಸಂಬಂಧಿಸಿದಂತೆ ಕಂಪನಿಗಳು ಹೆಚ್ಚುವರಿಯಾಗಿ 500 ಕೋಟಿ ರೂಪಾಯಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮರುಪಾವತಿಗೂ ಸಿಕ್ಕಿದೆ ರಿಲೀಫ್!
ಸಾಲ ಪಡೆದ ಕಂಪನಿಗಳಿಗೆ ಮರುಪಾವತಿ ವಿಚಾರದಲ್ಲೂ ಸರ್ಕಾರ ಭಾರಿ ರಿಲೀಫ್ ನೀಡಿದೆ. ಈ ತುರ್ತು ಸಾಲದ ಅವಧಿಯನ್ನು ಗರಿಷ್ಠ 7 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಸಾಲ ಪಡೆದ ಮೊದಲ ಎರಡು ವರ್ಷಗಳ ಕಾಲ ಮರುಪಾವತಿಗೆ ವಿನಾಯಿತಿ ನೀಡಲಾಗಿದ್ದು, ಕಂಪನಿಗಳಿಗೆ ತಕ್ಷಣದ ಒತ್ತಡ ಇರುವುದಿಲ್ಲ. ಬಡ್ಡಿದರದ ಶೇ. 50ರಷ್ಟನ್ನು 'ಫಂಡೆಡ್ ಇಂಟರೆಸ್ಟ್ ಟರ್ಮ್ ಲೋನ್' ರೂಪಕ್ಕೆ ಪರಿವರ್ತಿಸಲು ಅವಕಾಶ ನೀಡಲಾಗಿದೆ.
ಉದ್ಯೋಗ ರಕ್ಷಣೆಯೇ ಮೂಲ ಉದ್ದೇಶ: ಸಚಿವ ರಾಮ್ ಮೋಹನ್ ನಾಯ್ಡು
ಈ ಬೃಹತ್ ಪ್ಯಾಕೇಜ್ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, "ಜಾಗತಿಕ ಮಟ್ಟದ ಅನಿಶ್ಚಿತತೆಯ ನಡುವೆಯೂ ಭಾರತೀಯ ಏರ್ಲೈನ್ಗಳು ದಿಟ್ಟತನದಿಂದ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ವಿಮಾನಯಾನ ಕಂಪನಿಗಳಿಗೆ ಆರ್ಥಿಕ ಬೆಂಬಲ ನೀಡುವುದು ಅತ್ಯಗತ್ಯ. ಸರ್ಕಾರದ ಈ ಕ್ರಮವು ವಲಯದ ಉದ್ಯೋಗಗಳನ್ನು ರಕ್ಷಿಸಲು, ಜಾಗತಿಕ ಸಂಪರ್ಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹಾಗೂ ವಿಮಾನಯಾನವನ್ನು ಅವಲಂಬಿಸಿರುವ MSME ವಲಯಕ್ಕೆ ಬಲ ತುಂಬಲು ನೆರವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

