
ಬ್ಯಾಂಕಿಂಗ್ ವಲಯಕ್ಕೆ 'ಕ್ಲೌಡ್ ಮೈಥೋಸ್' ಎಐ ಕಂಟಕ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸಭೆ
ವಿವಿಧ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿರುವ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ವಲಯದಲ್ಲಿ ತಕ್ಷಣವೇ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆಯ ಆತಂಕವೂ ಹೆಚ್ಚಾಗುತ್ತಿದೆ. ಅಮೆರಿಕದ ಆಂಥ್ರೋಪಿಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹಾಗೂ ಅಪಾಯಕಾರಿ 'ಕ್ಲೌಡ್ ಮೈಥೋಸ್' ಎಐ ಮಾದರಿಯಿಂದ ಎದುರಾಗಬಹುದಾದ 'ಅಭೂತಪೂರ್ವ' ಸೈಬರ್ ಭದ್ರತಾ ಬೆದರಿಕೆಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಹಣಕಾಸು ವಲಯದಲ್ಲಿ ತಕ್ಷಣವೇ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಏನಿದು ಕ್ಲೌಡ್ ಮೈಥೋಸ್?
ಆಂಥ್ರೋಪಿಕ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ 'ಕ್ಲೌಡ್ ಮೈಥೋಸ್' ಪ್ರಸ್ತುತ ಜಗತ್ತಿನ ಅತ್ಯಂತ ಪ್ರಬಲವಾದ ಸೈಬರ್ ಭದ್ರತಾ ಎಐ ಮಾದರಿಯಾಗಿದೆ. ಇದು ಎಷ್ಟೊಂದು ನಿಖರವಾಗಿದೆ ಎಂದರೆ, ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಖುದ್ದು ಸಂಸ್ಥೆಯೇ ಸ್ಪಷ್ಟಪಡಿಸಿದೆ. ಪ್ರಮುಖ ಆಪರೇಟಿಂಗ್ ಸಿಸ್ಟಂಗಳು ಮತ್ತು ಬ್ಯಾಂಕಿಂಗ್ ಐಟಿ ವ್ಯವಸ್ಥೆಗಳಲ್ಲಿ ಮನುಷ್ಯರ ಕಣ್ಣಿಗೆ ಬೀಳದ, ಸುಮಾರು 27 ವರ್ಷಗಳಷ್ಟು ಹಳೆಯದಾದ ಸಾವಿರಾರು ಸೈಬರ್ ಭದ್ರತಾ ಲೋಪಗಳನ್ನು ಈ ಎಐ ಈಗಾಗಲೇ ಪತ್ತೆಹಚ್ಚಿದೆ.
ಇದನ್ನು ಸಾರ್ವಜನಿಕಗೊಳಿಸುವುದು ಲ್ಯಾಪ್ಟಾಪ್ ಹೊಂದಿರುವ ಪ್ರತಿಯೊಬ್ಬರಿಗೂ ಅತ್ಯಾಧುನಿಕ ಹ್ಯಾಕಿಂಗ್ ಅಸ್ತ್ರವನ್ನು ಕೈಗಿತ್ತಂತಾಗುತ್ತದೆ ಎಂದು ಆಂಥ್ರೋಪಿಕ್ ಹೇಳಿದೆ. ಈ ಕಾರಣಕ್ಕಾಗಿ ಕೇವಲ ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ನಂತಹ ಆಯ್ದ 40 ಕಂಪನಿಗಳಿಗೆ ಮಾತ್ರ ಇದರ ಪ್ರವೇಶಾವಕಾಶ ನೀಡಲಾಗಿತ್ತು. ಆದರೆ, ಇತ್ತೀಚೆಗೆ ಅನಧಿಕೃತ ಗುಂಪೊಂದು ಇದರ ನಿಯಂತ್ರಣ ಸಾಧಿಸಿದೆ ಎಂಬ ವರದಿಗಳು ಜಾಗತಿಕ ಬ್ಯಾಂಕಿಂಗ್ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ಹಾಗೂ ಜಾಗತಿಕ ಬ್ಯಾಂಕ್ಗಳು ಸಹ ಈ ಬಗ್ಗೆ ಈಗಾಗಲೇ ತುರ್ತು ಸಭೆಗಳನ್ನು ನಡೆಸಿವೆ.
ಭಾರತದ ಮುಂದಿನ ಹೆಜ್ಜೆಯೇನು?
ಕ್ಲೌಡ್ ಮೈಥೋಸ್ನಂತಹ ಪ್ರಬಲ ಎಐ ಬಳಸಿ ದುಷ್ಕರ್ಮಿಗಳು ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯನ್ನಾದರೂ ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗ್ರಾಹಕರ ದತ್ತಾಂಶ ಹಾಗೂ ಹಣಕಾಸು ಸಂಪನ್ಮೂಲಗಳನ್ನು ರಕ್ಷಿಸಲು ಬ್ಯಾಂಕ್ಗಳು ತಮ್ಮ ಐಟಿ ವ್ಯವಸ್ಥೆಗಳನ್ನು ತಕ್ಷಣವೇ ಬಲಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಸೈಬರ್ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ನೈಜ ಸಮಯದಲ್ಲಿ ಭದ್ರತಾ ಮಾಹಿತಿ ಹಂಚಿಕೊಳ್ಳಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ , ಬ್ಯಾಂಕ್ಗಳು ಮತ್ತು ಇತರ ಏಜೆನ್ಸಿಗಳ ನಡುವೆ ಬಲವಾದ ಸಮನ್ವಯ ವ್ಯವಸ್ಥೆಯನ್ನು ಸ್ಥಾಪಿಸಲು ಹಣಕಾಸು ಸಚಿವಾಲಯ ಸಲಹೆ ನೀಡಿದೆ. ಇದಲ್ಲದೆ, ಸಂಭವನೀಯ ಬೆದರಿಕೆಗಳನ್ನು ಎದುರಿಸಲು ತ್ವರಿತ ಸಾಂಸ್ಥಿಕ ಕಾರ್ಯವಿಧಾನವನ್ನು ರೂಪಿಸುವಂತೆ ಭಾರತೀಯ ಬ್ಯಾಂಕ್ಗಳ ಸಂಘಕ್ಕೆ (IBA) ನಿರ್ದೇಶನ ನೀಡಲಾಗಿದ್ದು, ಬ್ಯಾಂಕ್ಗಳು ಅತ್ಯುತ್ತಮ ಸೈಬರ್ ಭದ್ರತಾ ತಜ್ಞರು ಮತ್ತು ಏಜೆನ್ಸಿಗಳ ನೆರವು ಪಡೆಯುವಂತೆ ಸೂಚಿಸಲಾಗಿದೆ.

